ADVERTISEMENT

ಸಂಶಯಾಸ್ಪದ ಹಣಕಾಸು ವ್ಯವಹಾರ: ನಿಗಾ ವಹಿಸಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:27 IST
Last Updated 4 ಅಕ್ಟೋಬರ್ 2021, 16:27 IST

ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ₹ 1 ಲಕ್ಷ ಹಾಗೂ ₹ 10 ಲಕ್ಷ ಮೇಲ್ಪಟ್ಟು ಸಂಶಯಾಸ್ಪದ ಹಣಕಾಸು ವ್ಯವಹಾರ ಮತ್ತು ಸಾಗಾಟದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಸಂಶಯಾಸ್ಪದ ಹಣಕಾಸು ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇರಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಲವು ವರ್ಷಗಳಿಂದ ಆರಂಭ ಇರದ ಬ್ಯಾಂಕ್ ಖಾತೆಗಳು ಏಕಾಏಕಿ ಆರಂಭವಾಗುವುದು. ಪ್ರತಿ ಬ್ಯಾಂಕಿನ ಪ್ರತಿದಿನದ ಹಣಕಾಸು ವ್ಯವಹಾರಗಳ ಬಗ್ಗೆ ಅಂಕಿ ಅಂಶಗಳ ಸಹಿತ ಮಾಹಿತಿ ಒದಗಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ADVERTISEMENT

ಅಕ್ರಮವಾಗಿ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ಬಗ್ಗೆ ಜಿಲ್ಲೆಯಾದ್ಯಂತ ನಿಗಾ ಇಡಬೇಕು. ಬೇರೆಬೇರೆ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಬೃಹತ್ ಪ್ರಮಾಣದ ಅಕ್ರಮ ವಸ್ತುಗಳು ವಿಧಾನಸಭಾ ಕ್ಷೇತ್ರಕ್ಕೆ ರವಾನೆಯಾಗುವ ಬಗ್ಗೆಯೂ ಮತ್ತು ವಿವಿಧ ಅಂಗಡಿಗಳ ಮೂಲಕ ಮಾರಾಟದ ಬಗ್ಗೆಯೂ ಸೂಕ್ತ ನಿಗಾ ಇಡುವಂತೆ ಸೂಚಿಸಿದರು.

ಬ್ಯಾಂಕ್ ಎಟಿಎಂಗಳ ಮೂಲಕ ಹಾಗೂ ಬ್ಯಾಂಕ್ ವ್ಯವಹಾರ ನಡೆಸುವ ಬಗ್ಗೆಯೂ ಸೂಕ್ತ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.

ಈ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು. ಈ ಕುರಿತು ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಕ್ತ ನಿಗಾ ವಹಿಸಬೇಕು. ಸಂಶಯಾಸ್ಪದ ಬ್ಯಾಂಕ್ ವ್ಯವಹಾರಗಳ ಗಮನ ಹರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಸೇರಿದಂತೆ ವಿವಿಧ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.