
ಸೋಲಾಪುರ: ಇಲ್ಲಿ ಶಿವಯೋಗಿ ಸಿದ್ಧೇಶ್ವರ ಜಾತ್ರೆಗೆ 10 ದಿನಗಳು ಬಾಕಿ ಇದ್ದು, ಸಿದ್ಧೇಶ್ವರ ದೇವಸ್ಥಾನದ ವತಿಯಿಂದ ಭಕ್ತರಿಗಾಗಿ ಮಹಾಪ್ರಸಾದದ ಸಿದ್ಧತೆ ಆರಂಭಗೊಂಡಿದೆ.
ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮತ್ತು ಸಂಜೆ 7ರಿಂದ ರಾತ್ರಿ 10ರವರೆಗೆ ದಾಸೋಹಭವನದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಒಂದು ಪಂಕ್ತಿಗೆ 250 ಭಕ್ತರು ಕುಳಿತು, ಊಟ ಮಾಡಬಹುದಾಗಿದೆ.
‘ಸಿದ್ಧೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಧರ್ಮರಾಜ ಕಾಡಾದಿ ಮಾರ್ಗದರ್ಶನದಲ್ಲಿ ದಾಸೋಹ ನಡೆಯುತ್ತಿದೆ. ಸುಮಾರು ಒಂದು ಲಕ್ಷ ಜೋಳ ಹಾಗೂ ಒಂದು ಲಕ್ಷ ಸಜ್ಜೆ ರೊಟ್ಟಿಗಳನ್ನು ತಯಾರಿಸಲಾಗುತ್ತಿದ್ದು. 40,000 ಶೇಂಗಾ ಹೋಳಿಗೆ ವಿತರಿಸಲಾಗುತ್ತದೆ’ ಎಂದು ದೇವಸ್ಥಾನದ ಟ್ರಸ್ಟಿ ವಿಶ್ವನಾಥ ಲಬ್ಬಾ ಮಾಹಿತಿ ನೀಡಿದರು.
‘ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ, 10 ದಿನಗಳು ಪ್ರಸಾದವಾಗಿ ಜೋಳ ಮತ್ತು ಸಜ್ಜಿ ರೊಟ್ಟಿ, ಚಪಾತಿ, ಶಿರಾ, ಗರಗಟ್ಟಾ, ಅನ್ನ ಹಾಗೂ ಶೇಂಗಾ ಹೋಳಿಗೆ ಉಣಬಡಿಸಲಾಗುತ್ತಿದೆ’ ಎಂದರು.
‘ತೈಲಾಭಿಷೇಕದಿಂದ ಆರಂಭಿಸಿ, ಬಣ್ಣ ಬಣ್ಣದ ಮದ್ದಿನವರೆಗೆ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಜಾತ್ರೆ ಅವಧಿಯಲ್ಲಿ ಶ್ರೀಗಳ ದರ್ಶನಕ್ಕೂ ಭಕ್ತರು ಬರುತ್ತಾರೆ. ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
10 ಸಾವಿರ ಪ್ರಸಾದದ ಪ್ಯಾಕೆಟ್ಗಳು: ನಂದಿಧ್ವಜಧಾರಕರಿಗೆ ದೇವಸ್ಥಾನದ ವತಿಯಿಂದ ತೈಲಾಭಿಷೇಕ ಹಾಗೂ ಅಕ್ಷತಾ ಸಮಾರಂಭದ ದಿನಗಳಲ್ಲಿ ಬಾಳೆಹಣ್ಣು ಮತ್ತು ಚಿವಡಾ ಪ್ಯಾಕೆಟ್ಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಅದರ ಸಿದ್ಧತೆ ಕೂಡ ಆರಂಭಗೊಂಡಿದ್ದು, ಸುಮಾರು 10 ಸಾವಿರ ಪ್ರಸಾದದ ಪ್ಯಾಕೆಟ್ಗಳನ್ನು ತಯಾರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.