ತಾಳಿಕೋಟೆ: ಆರ್ಥಿಕ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಆರಂಭಿಸಲಾದ ಸಿದ್ಧಸಿರಿ ಸೌಹಾರ್ದ ಸಂಘವು ಇಂದು 81,981 ಸದಸ್ಯರನ್ನು, ₹4380 ಕೋಟಿ ಠೇವಣಿ, ₹72 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ವಿಜಯಪುರ ನಗರ ಶಾಸಕ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ರಾ. ಪಾಟೀಲ( ಯತ್ನಾಳ) ಹೇಳಿದರು.
ಪಟ್ಟಣದಲ್ಲಿ ಸಿದ್ಧಸಿರಿ ಆಡಳಿತ ಮಂಡಳಿ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಬ್ಯಾಂಕಿನ ಸ್ವಂತ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವರಿಗಾಗಿ ಪ್ರಧಾನ ಮಂತ್ರಿ ಜನ ಔಷಧಾಲಯ, ಬೀದಿಬದಿ ವ್ಯಾಪಾರಿಗಳಿಗೆ ‘ಕೇಸರಿ ಸ್ವಾವಲಂಬಿ’ ಸಾಲ ಯೋಜನೆ, ಪ್ರತಿ ವರ್ಷ ತುಮಕೂರು ಸಿದ್ದಗಂಗಾ ಮಠ ಹಾಗೂ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ 101 ಕ್ವಿಂಟಲ್ ಅಕ್ಕಿ ಹಾಗೂ 5001 ವಿಭೂತಿಗಳ ದೇಣಿಗೆ, ಗೋರಕ್ಷಾ ಕೇಂದ್ರಗಳು, ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು ಇದರ ಅಡಿಯಲ್ಲಿ ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಡವರಿಗಾಗಿ ಉಚಿತ ಡಯಾಲಿಸಿಸ್ ಕೇಂದ್ರ ನಡೆಸಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ನೂತನ ಕಟ್ಟಡ ಉದ್ಘಾಟಿಸಿದರು. ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲತಪಸ್ವಿ ಸೋಮಲಿಂಗ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಖಾಸ್ಗತೇಶ್ವರ ಮಠದ ಮುಖ್ಯಸ್ಥ ಮುರುಗೇಶ ವಿರಕ್ತಮಠ ಸಮ್ಮುಖ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ವೈದ್ಯ ಡಾ.ವಿಜಯಕುಮಾರ ಕಾರ್ಚಿ, ಪುರಸಭೆ ಮಾಜಿ ಸದಸ್ಯ ನಾಗೇಶ ದೇಶಪಾಂಡೆ, ಅಡತ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಶೆಟ್ಟಿ, ರಾಮನಗೌಡ ಪಾಟೀಲ, ಪ್ರಭುಗೌಡ ದೇಸಾಯಿ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಯತ್ನಾಳರ ಅಭಿಮಾನಿಗಳು ಇದ್ದರು. ತೇಜಶ್ವಿನಿ ಡಿಸಲೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.