
ಸಿಂದಗಿ: ಪಟ್ಟಣದ ಸಾರಂಗಮಠ-ಗಚ್ಚಿನಮಠದ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನ.25ರಂದು ಮಧ್ಯಾಹ್ನ 2 ಗಂಟೆಗೆ ಸಾರಂಗಮಠದಿಂದ ಗಚ್ಚಿನಮಠದ ವರೆಗೆ 1 ಕಿ.ಮೀ ದೂರದವರೆಗೆ ಮಹಿಳೆಯರು ಬೆಳ್ಳಿ ತೇರು ಎಳೆಯುತ್ತಾರೆ.
ತೇರಿನಲ್ಲಿ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೊಂಡಿರುತ್ತದೆ. ಮಹಿಳೆಯರೆ ಬೆಳ್ಳಿ ತೇರು ಎಳೆಯುವುದು ಉತ್ತರಕರ್ನಾಟಕ ಭಾಗದಲ್ಲಿ ಇದೊಂದು ವೈಶಿಷ್ಟ್ಯವಾಗಿದೆ. ಈ ತೇರಿಗೆ ಹರಕೆ ತೇರು ಎಂದು ಕರೆಯಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಮಹಿಳೆಯರು ಇಷ್ಟಾರ್ಥ ಸಿದ್ಧಿಗಾಗಿ ತೇರು ಎಳೆಯಲು ಪಾಲ್ಗೊಳ್ಳುತ್ತಾರೆ.
ಈ ಬೆಳ್ಳಿ ತೇರನ್ನು ಮಹಿಳೆಯರು ಎಳೆಯುವ ಕಾರ್ಯ 2018 ರಿಂದ ಪ್ರಾರಂಭಗೊಂಡಿದೆ. 120 ಕೆ.ಜಿ ತೂಕದ ಈ ಬೆಳ್ಳಿ ತೇರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗೋಪಾಡಿ ಗ್ರಾಮದ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಸಹೋದರರು ನಿರ್ಮಿಸಿದ್ದಾರೆ. ನವೆಂಬರ್ 24ರಂದು ಬೆಳಿಗ್ಗೆ 9 ಗಂಟೆಗೆ ಸಾರಂಗಮಠದಿಂದ ಹೊರಡುವ ವೀರಭದ್ರೇಶ್ವರ, ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವವು ತಾಯಿ ನೀಲಗಂಗಾದೇವಿ ದೇವಸ್ಥಾನ ರಸ್ತೆ ಮಾರ್ಗವಾಗಿ ಊರನ ಹಿರಿಯಮಠದಿಂದ ಗಚ್ಚಿನಮಠ ತಲುಪುವುದು. ಅಂದೇ ಸಂಜೆ 5 ಗಂಟೆಗೆ ಗಚ್ಚಿನಮಠದಲ್ಲಿ ಕಾರ್ತಿಕೋತ್ಸವ ನಡೆಯುವುದು.
ನಂತರ ಗಚ್ಚಿನಮಠದಿಂದ ಸಾರಂಗಮಠದಲ್ಲಿನ ಸೋಮೇಶ್ವರ, ದಾನಮ್ಮದೇವಿ ದೇವಸ್ಥಾನಕ್ಕೆ ಮರಳುವ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಕೈಯಲ್ಲಿ ದೀಪ ಹಿಡಿದುಕೊಂಡು ಸಾಗುವರು. ಸಂಜೆ 6.30ಗಂಟೆಗೆ ಭದ್ರಕಾಳಿ ಅಮ್ಮನವರ ಕಲ್ಯಾಣ ಮಹೋತ್ಸವ ಹಾಗೂ ವೀರ ವೀರಾಗಿಣಿ ಅಕ್ಕಮಹಾದೇವಿ ಪುರಾಣ-ಪ್ರವಚನ ಮಹಾಮಂಗಲ ನಡೆಯಲಿದೆ ಎಂದು ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.