ವಿಜಯಪುರ: ತಮ್ಮ ಕಾಯಕದಿಂದ ಎಂಜಿನಿಯರುಗಳಿಗೆ ಆದರ್ಶ, ಮಾದರಿ, ಪ್ರೇರಣೆ ಆಗಿರುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಸವಿ ನೆನಪಿಗಾಗಿ ಹಾಗೂ ತಮ್ಮ ಮಗನ ಸ್ಮರಣಾರ್ಥ ಸಿವಿಲ್ ಎಂಜಿನಿಯರ್ ಒಬ್ಬರು ನಗರದ ಬಾಗಲಕೋಟೆ ರಸ್ತೆಯಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಸುಂದರವಾದ ‘ಸರ್ ಎಂ.ವಿ’ ವೃತ್ತ ನಿರ್ಮಿಸಿದ್ದಾರೆ.
ಸರ್ ಎಂ.ವಿಶ್ವೇಶ್ವರಯ್ಯ ಅವರು ನಾಡಿನ ಮೂಲೆ ಮೂಲೆಗೆ ತೆರಳಿ ಹಲವಾರು ಅಣೆಕಟ್ಟು, ಕೆರೆಗಳ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದಾರೆ. ಸ್ವಾತಂತ್ರ್ಯಾನಂತರ ಕುಡಿಯುವ ನೀರಿಗಾಗಿ ನಗರ ವಾಸಿಗಳು ನರಕಯಾತನೆ ಅನುಭವಿಸುತ್ತಿರುವುದನ್ನು ಅವರು ಕಂಡಿದ್ದರು. 1911ರಲ್ಲಿ ವಿಜಯಪುರದ ಭೂತನಾಳ ಕೆರೆಗೆ ಸ್ವತಃ ಭೇಟಿ ನೀಡಿ ನೀಲನಕ್ಷೆ ಸಿದ್ಧಪಡಿಸಿದ್ದರು. ವಿಜಯಪುರದ ಕುಡಿಯುವ ನೀರಿಗಾಗಿ ಹಾಕಿದ ಆ ಯೋಜನೆ ಇಂದಿಗೂ ನಗರವಾಸಿಗಳ ದಾಹ ತಣಿಸುತ್ತಿರುವುದು ವಿಶೇಷ.
ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಕಡೆ ಜಲ ಸಂಕಷ್ಟ ನಿವಾರಣೆಗೆ ಶ್ರಮಿಸಿರುವ ‘ಎಂಜಿನಿಯರುಗಳ ಗುರು’ವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ವೃತ್ತ ನಿರ್ಮಿಸಬೇಕಿತ್ತು. ಆದರೆ, ಇದುವರೆಗೆ ಆ ಕೆಲಸವಾಗಿಲ್ಲ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಎಂಜಿನಿಯರೊಬ್ಬರು ಸ್ವಂತ ಖರ್ಚಿನಲ್ಲಿ ಮಾಡಿರುವುದು ಹೆಮ್ಮೆಯ ವಿಷಯ. ಇದು ಅವರು ವಿಶ್ವೇಶ್ವರಯ್ಯನವರ ಮೇಲೆ ಇಟ್ಟಿರುವ ಗೌರವವನ್ನು ತೋರಿಸುತ್ತದೆ ಎಂದು ಎಂಜಿನಿಯರುಗಳು ಹೇಳುತ್ತಾರೆ.
‘ವಿಶ್ವೇಶ್ವರಯ್ಯ ಅವರು ಪ್ರತಿಯೊಬ್ಬ ಎಂಜಿನಿಯರುಗಳಿಗೆ ಆದರ್ಶರಾಗಿದ್ದಾರೆ. ಅವರ ಜಯಂತಿ ದಿನ ವೃತ್ತದಲ್ಲಿ ಭಾವಚಿತ್ರಕ್ಕೆ ಹಾರ ಹಾಕಿ ಬರುತ್ತಿದ್ದೆವು. ನನಗಿದ್ದ ಒಬ್ಬ ಮಗ ತೀರಿಕೊಂಡಿದ್ದ. ಅವನ ನೆನಪಿಗಾಗಿ ಹಾಗೂ ಎಂಜಿನಿಯರುಗಳಿಗೆ ಗುರುವಾದ ಎಸ್ಎಂವಿ ಅವರ ಗೌರವಾರ್ಥವಾಗಿ ಸುಮಾರು ₹5 ಲಕ್ಷ ಖರ್ಚು ಮಾಡಿ ವೃತ್ತ ನಿರ್ಮಿಸಿದ್ದೇನೆ. ₹1.10 ಲಕ್ಷ ಮೌಲ್ಯದ ಪಂಚಲೋಹ ಮಿಶ್ರಿತ ಪುತ್ಥಳಿ ತಂದಿದ್ದೇನೆ’ ಎಂದು ವೃತ್ತ ನಿರ್ಮಾಣ ಮಾಡಿರುವ ಸಿವಿಎಲ್ ಎಂಜಿನಿಯರ್ ರಾಮಕೃಷ್ಣ ಬೆನಕನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.