ಚಡಚಣ: ಭೀಮಾ ನದಿ ತೀರದ ಜನರು ಪ್ರವಾಹದಿಂದ ಕಂಗೆಟ್ಟು ಹೋಗಿದ್ದಾರೆ. ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸದಿರುವುದು ಖೇದಕರ ಸಂಗತಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಭೀಮಾ ನದಿ ತೀರದ ಪ್ರವಾಹಪೀಡಿತ ಉಮರಜ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಪ್ರವಾಹದಿಂದ ಪರದಾಡುತ್ತಿರುವ ಜನರ ನೆರವಿಗೆ ಅಧಿಕಾರಿಗಳು ಸ್ಪಂದಿಸಿ ನೀರಿನಲ್ಲಿ ಮುಳುಗಡೆಯಾದ ಮನೆಗಳಿಗೆ ಸರ್ಕಾರ ಘೋಷಿಸಿದ ₹10 ಸಾವಿರ ಸಹಾಯಧನ ಮತ್ತು ಜಾನುವಾರಗಳಿಗೆ ಮೇವು ಶೀಘ್ರದಲ್ಲಿ ಪೂರೈಕೆ ಮಾಡಬೇಕು ಎಂದರು.
ಪ್ರವಾಹದಿಂದ ಹಾನಿಗೊಳಗಾದ ಜಮೀನು ಹಾಗೂ ಮನೆಗಳ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ಶೀಘ್ರದಲ್ಲಿ ಒಪ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರವಾಹದಿಂದ ಭೀಮಾ ತೀರದ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಜಮೀನು ಮುಳಗಡೆಯಾಗಿ ಬಹಳಷ್ಟು ಹಾನಿಯಾಗಿದೆ ಎಂದರು.
ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಚಡಚಣ, ಇಂಡಿ ತಾಲ್ಲೂಕಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಿವಾಜಿ ವಾಲಿಕಾರ, ರವಿ ಬಿರಾದಾರ, ಮುಖಂಡರಾದ ಶಿವಾನಂದ ಭೈರಗೊಂಡ, ಬಸು ಸಾಹುಕಾರ ಬಿರಾದಾರ, ಜಗದೇವ ಭೈರಗೊಂಡ, ಶಿವರಾಜ ಭೈರಗೊಂಡ, ಮಹಾದೇವ ಹಿರೇಕುರಬರ, ಅಶೋಕ ಬೋರ್ಗಿ, ಭೀಮು ರುದ್ರಾಕ್ಷಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.