ವಿಜಯಪುರ: ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಹಾಗೂ ವಿಜಯಪುರ ಅಮೆಚೂರ್ ಸಂಸ್ಥೆ ಸಹಯೋಗದೊಂದಿಗೆ ನಗರದ ಹೊರವಲಯದ ಸೋಲಾಪುರ್ ಬೈಪಾಸ್ನಲ್ಲಿ ಅ.20 ಮತ್ತು 21ರಂದು ನಡೆಯಲಿರುವ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಫ್ಗಾಗಿ ಸಿದ್ಧತೆ ಪೂರ್ಣಗೊಂಡಿದೆ.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿರುವ 250ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಮಂಗಳವಾರವೇ ಪೂರ್ವ ತಯಾರಿ ನಡೆಸಿದರು. ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಕೂಡ ಈಗಾಗಲೇ ವಿಜಯಪುರಕ್ಕೆ ಆಗಮಿಸುತ್ತಾರೆ ಎಂದರು.
ವಿಜಯಪುರ ಜಿಲ್ಲೆಯಿಂದ 12 ಬಾಲಕರು, 5 ಬಾಲಕಿಯರ, ವಿಜಯಪುರ ಕ್ರೀಡಾ ಶಾಲೆ 13 ಬಾಲಕರು, 13 ಬಾಲಕಿಯರು, ಬಾಗಲಕೋಟೆ ಜಿಲ್ಲೆಯಿಂದ 13 ಬಾಲಕರು, 13 ಬಾಲಕಿಯರು, ಬಾಗಲಕೋಟೆ ಕ್ರೀಡಾ ಶಾಲೆಯಿಂದ 12 ಬಾಲಕರು, 7 ಬಾಲಕಿಯರು, ಗದಗ ಜಿಲ್ಲೆಯಿಂದ 11 ಬಾಲಕರು, 3 ಬಾಲಕಿಯರು, ಗದಗ ಕ್ರೀಡಾ ಶಾಲೆದಿಂದ 9 ಬಾಲಕರು 1 ಬಾಲಕಿಯರು, ಬೆಳಗಾವಿ ಜಿಲ್ಲೆಯಿಂದ 12 ಬಾಲಕರು, ಬೆಳಗಾವಿ ಕ್ರೀಡಾ ಶಾಲೆಯಿಂದ 5 ಬಾಲಕರು, 3 ಬಾಲಕಿಯರು, ಬೆಂಗಳೂರು ಜಿಲ್ಲೆಯಿಂದ 16 ಬಾಲಕರು ಮೂರು ಬಾಲಕಿಯರು, ತುಮಕೂರು ಜಿಲ್ಲೆಯಿಂದ ಮೂರು ಬಾಲಕರು, ಮೈಸೂರು ಜಿಲ್ಲೆಯಿಂದ 7 ಬಾಲಕರು 1 ಬಾಲಕಿಯರು, ಕ್ರೀಡಾ ಶಾಲೆ ಚಂದರಗಿ 8 ಜನ ಬಾಲಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವಿಶೇಷವಾಗಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ನವೀನ್ ಜಾನ್ ಬೆಂಗಳೂರು, ದಾನಮ್ಮ ಚಿಚಕಂಡಿ ಬಾಗಲಕೋಟೆ, ಸಹನಾ ಕುಡಿ, ನೂರು ವಿಜಯಪುರ ಹಾಗೂ ಕೀರ್ತಿ ರಂಗಸ್ವಾಮಿ ಬೆಂಗಳೂರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಎಂದು ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಹಾಗೂ ವಿಜಯಪುರ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ್ ತಿಳಿಸಿದ್ದಾರೆ.
ಚಾಂಪಿಯನ್ ಶಿಫ್ನಲ್ಲಿ 14, 16 ಮತ್ತು 18 ವರ್ಷದೊಳಗಿನ ಬಾಲಕ–ಬಾಲಕಿಯರ ಹಾಗೂ ಪುರುಷ–ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ ಎಂದರು.
ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ನಗರದ ಸೋಲಾಪುರ ರಸ್ತೆಯ ಬೈಪಾಸ್ನಿಂದ ಬರಟಗಿ ರಸ್ತೆಯಲ್ಲಿ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ ನಡೆಯಲಿದೆ. ಅರ್ಹ 40 ಸೈಕ್ಲಿಸ್ಟ್ಗಳನ್ನು ಆಯ್ಕೆ ಮಾಡಿ, ನವೆಂಬರ್ 25ರಿಂದ 28ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.