
ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರ ಬಿಂಜಲಭಾವಿ ಗ್ರಾಮದಲ್ಲಿ 22ನೇ ವರ್ಷದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಸೋಮವಾರ ನೆರವೇರಿತು.
ಬೆಳಿಗ್ಗೆ ಮಲ್ಲಿಕಾರ್ಜುನನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುರೇಶ ನಾಡಗೌಡ ಅವರ ಮನೆಯಿಂದ ಕಳಸ, ಉಕ್ಕಲಿ ಅವರ ಮನೆಯಿಂದ ಮಿಣಿಯನ್ನು ಮೆರವಣಿಗೆಯ ಮೂಲಕ ತರಲಾಯಿತು. ನಂತರ ರಥಕ್ಕೆ ಪೂಜಾ ಕಾರ್ಯವನ್ನು ಮಾಗಣಗೆರಿ ಶ್ರೀಗಳು ಹಾಗೂ ಇತರರು ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ರಾತ್ರಿ ಧರ್ಮಸಭೆ ನಡೆಯಿತು. ಸಾನ್ನಿಧ್ಯವನ್ನು ಮಾಗಣಗೇರಿ ಬ್ರಹನ್ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಪುರಾಣಿಕರಾದ ಬ್ಯಾಡಗಿಯ ಸಿದ್ಧರಾಮ ಶಿವಾಚಾರ್ಯರಿಂದ ಕೊಪ್ಪಳ ಗವಿಸಿದ್ಧೇಶ್ವರ ಮಹಾಪುರಾಣವು ಮಹಾಮಂಗಲವಾಯಿತು. ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕ ಜರುಗಿತು.
ಉತ್ಸವದಲ್ಲಿ ಮುಖಂಡರಾದ ಎ.ಎಸ್.ನಾಡಗೌಡ, ಆರ್.ಡಿ.ಪಾಟೀಲ, ಜಿ.ಎಂ.ಬಿರಾದಾರ, ಜಿ.ಎಸ್.ಪಡೇಕನೂರ, ಪರಮಣ್ಣ ನಂದ್ಯಾಳ, ಎಸ್.ಎಸ್.ಪಾಟೀಲ, ಶಾಂತಪ್ಪ ಪಟ್ಟಣಶೆಟ್ಟಿ, ಸಿದ್ದನಗೌಡ ಚೌದ್ರಿ, ಪ್ರಕಾಶ ರಾಜಬಾಳ, ಅಕ್ಬರ್ ಮುಜಾವರ, ಗ್ರಾ.ಪಂ.ಸದಸ್ಯ ಪಿಂಟು ಮುಜಾವರ ಸೇರಿದಂತೆ ಬಿಂಜಲಭಾವಿಯ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ, ಯುವಕ ಮಂಡಳಿ ಹಾಗೂ ಸಮಸ್ತ ಸದ್ಭಕ್ತ ಮಂಡಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.