
ತಾಳಿಕೋಟೆ: ‘ಧರ್ಮ ಎಂದರೆ ಮತವಲ್ಲ, ಎಲ್ಲರಿಗೂ ಒಳಿತು ಮಾಡುವ ಗುಣಮೌಲ್ಯ. ಇದೇ ಈ ನಾಡಿನ ಮಹಾತ್ಮರ, ಸಂತರ, ಶರಣರ ಬದುಕಿನ ಆದರ್ಶಗಳಾಗಿದ್ದವು. ಅವುಗಳನ್ನು ಅಳವಡಿಸಿಕೊಂಡು ನಡೆದರೆ ತನಗೂ, ಎಲ್ಲರಿಗೂ ಸುಖ ಶಾಂತಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಾವದಗಿ ಗ್ರಾಮದ ಪರ್ವತೇಶ್ವರ ಬ್ರಹನ್ಮಠದ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರಹಮ್ಮಿಕೊಂಡಿದ್ದ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಮಹೋತ್ಸವದಲ್ಲಿ ತೊಟ್ಟಿಲೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಬದುಕು ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕಿಂತ ಎಷ್ಟು ನೆಮ್ಮದಿಯಿಂದ ಕೂಡಿದೆ ಎಂಬುದು ಮುಖ್ಯ. ಸದಾ ಅನ್ಯರ ಕುರಿತು ಚಿಂತಿಸದೆ ನಮ್ಮ ಕುರಿತು ಚಿಂತಿಸುವ ಅಗತ್ಯವಿದೆ. ಆಧ್ಯಾತ್ಮಿಕ ಬದುಕಿನೊಂದಿಗೆ ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಸುಖ ಶಾಂತಿ ದೊರಕುತ್ತದೆ’ ಎಂದರು.
‘ರಾಜೇಂದ್ರ ಒಡೆಯರ್ ಶಿವಾಚಾರ್ಯರು ಈ ಭಾಗದ ಭಕ್ತರನ್ನು ಸಂಸ್ಕರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಧರ್ಮ ಜಾಗೃತಿ ಕಾರ್ಯ ಎಲ್ಲರಿಗೂ ಅನುಕರಣೀಯವಾಗಿದೆ. ಅವರ ಗುರು ಪಟ್ಟಾಧಿಕಾರದ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೊಳಿಸಿದಂತೆ ಅವರು ಮಾಡುವ ಎಲ್ಲ ಧರ್ಮ ಕಾರ್ಯಗಳಲ್ಲಿ ನಿಮ್ಮೆಲ್ಲರ ಸಹಕಾರ ಅವರೊಂದಿಗಿರಲಿ’ ಎಂದರು.
ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಸ್ವಾಮೀಜಿ, ಚಬನೂರಿನ ರಾಮಲಿಂಗಯ್ಯ ಸ್ವಾಮೀಜಿ, ಸಿಂಧನೂರಿನ ಗುರುಮೂರ್ತಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ, ಪುರಾಣಿಕ ರಾಚಯ್ಯ ಹಿರೇಮಠ, ಸಂಗೀತಗಾರ ಸೋಮಯ್ಯ ಸ್ವಾಮಿ, ತಬಲವಾದಕ ಮಹಾಂತೇಶ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.