ವಿಜಯಪುರ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಗುಜರಾತ್ ಭಯೋತ್ಪಾದನಾ ನಿಗ್ರಹದಳವು ಆಧಾರರಹಿತವಾಗಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿರುವುದು ಬಿಜೆಪಿ ಸರ್ಕಾಗಳ ಪ್ಯಾಸಿಸ್ಟ್ ಧೊರಣೆಯ ಮುಂದುವರಿಕೆಯೇ ಆಗಿದೆ.ಕೂಡಲೇ ತೀಸ್ತಾ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ, ಅಂದಿನ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಎಲ್ಲವೂ ಕೋಮುಗಲಭೆಗೆ ಸಹಕಾರ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು. ಆದರೆ ನಿನ್ನೆ ಸುಪ್ರೀಂ ಕೋರ್ಟ್ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಈ ಬಂಧನವಾಗಿರುವುದು ಸರ್ವಾಧಿಕಾರವಲ್ಲದೇ ಮತ್ತೇನೂ ಅಲ್ಲ ಎಂದು ಆರೋಪಿಸಿದರು.
ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವವರನ್ನು ಹಾಗೂ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರನ್ನು ರಕ್ಷಣೆ ಹಾಗೂ ಸುರಕ್ಷತೆಯ ಹೆಸರಿನಲ್ಲಿ ವ್ಯವಸ್ಥಿತವಾಗಿ ಬಂಧಿಸಿ ಹೋರಾಟ ಚಳವಳಿಗಳನ್ನು ಸದೆ ಬಡಿಯಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಜನರ ಆಕ್ರೋಶ ಹೆಚ್ಚಿದಾಗ ಹೋರಾಟ ಬುಗಿಲೇಳುವುದನ್ನು ತಡೆಯಲಾಗುವುದಿಲ್ಲ ಎಂಬುದನ್ನು ಇತಿಹಾಸ ಸಾಬೀತು ಮಾಡಿದೆ ಎಂದರು.
ವೇದಿಕೆಯ ಪ್ರಮುಖರಾದ ಸದಾನಂದ ಮೋದಿ, ಅಕ್ರಮ ಮಾಶಾಳಕರ, ಇರ್ಫಾನ್ ಶೇಖ್, ವಕೀಲರಾದ ತಿಪ್ಪಣ್ಣ ದೊಡಮನಿ, ಲಕ್ಮಣ ಹಂದ್ರಾಳ, ಸಿದ್ದಲಿಂಗ ಬಾಗೇವಾಡಿ, ನಿರ್ಮಲಾ ಹೊಸಮನಿ, ಸುರೇಖಾ ರಜಪೂತ, ಅಕ್ಷಯ ಅಜಮನಿ, ಶಂಕರ ಚಲವಾದಿ, ಸಂಜು, ದಸ್ತಗೀರ ಉಕ್ಕಲಿ, ಅನುಶ್ರೀ ಹಜೇರಿ, ಕಾವೇರಿ ರಜಪೂತ, ಅನುರಾಗ ಸಾಳುಂಕೆ, ಗೀತಾ ಕಟ್ಟಿ, ಸುನಂದಾ ನಾಯಕ, ರೂಪಾ ಕೊಟ್ಯಾಳ, ಜಾಯಿದ್ ಸಿಂದಗಿ, ಅತಹುಲ್ಲಾ ದ್ರಾಕ್ಷಿ, ಕೃಷ್ಣಾ ಜಾದವ, ಎಂ.ಸಿ. ಕಮ್ಮಾರ ಶರಣು ಗಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.