ADVERTISEMENT

ತೆಲಸಂಗ: ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:42 IST
Last Updated 29 ಮಾರ್ಚ್ 2020, 13:42 IST
ಮಹಾರಾಷ್ಟ್ರದಿಂದ ವಾಪಸಾದ ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿಯ ಕೂಲಿ ಕಾರ್ಮಿಕರಿಗೆ ತೆಲಸಂಗದಲ್ಲಿ ಗ್ರಾಮಸ್ಥರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು
ಮಹಾರಾಷ್ಟ್ರದಿಂದ ವಾಪಸಾದ ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿಯ ಕೂಲಿ ಕಾರ್ಮಿಕರಿಗೆ ತೆಲಸಂಗದಲ್ಲಿ ಗ್ರಾಮಸ್ಥರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು   

ತೆಲಸಂಗ: ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿ ಗ್ರಾಮದ ಕೂಲಿ ಕಾರ್ಮಿಕರನ್ನು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಹೊರ ಕಳುಹಿಸಲಾಗಿದೆ. ಮಕ್ಕಳನ್ನು ಕರೆದುಕೊಂಡು ನಡೆಯುತ್ತಲೇ ಸ್ವಗ್ರಾಮ ಸೇರಿಕೊಳ್ಳಲು ತೆರಳುತ್ತಿದ್ದ ಮಧ್ಯದಲ್ಲಿ ತೆಲಸಂಗ ಪ್ರವೇಶಿಸಿದ 25 ಮಂದಿಗೆ ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿಯವರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ಮೂರು ದಿನಗಳಿಂದ ಅವರು ಹೊಲ– ಗದ್ದೆಗಳ ಮೂಲಕ ನಡೆದುಕೊಂಡು ತೆರಳುತ್ತಿದ್ದಾರೆ. ಅನ್ನ, ನೀರು ಸಿಗದೆ ಹೈರಾಣಾಗಿದ್ದ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಊಟ ನೀಡಿ ಧೈರ್ಯ ತುಂಬಿದರು.

‘ಲಾಕ್ ಡೌನ್ ಆಗಿರುವುದರಿಂದ ಕೆಲಸ ಸಿಗುತ್ತಿಲ್ಲ. ಅಗತ್ಯ ವಸ್ತುಗಳು ಕೂಡ ಸಿಗುತ್ತಿಲ್ಲ. ನೀವು ನಿಮ್ಮೂರಿಗೆ ತೆರಳಿರಿ ಎಂದು ಮನೆಗಳನ್ನು ಮಾಲೀಕರು ಖಾಲಿ ಮಾಡಿಸಿದರು. ಮುಖ್ಯ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಯಾವ ಗ್ರಾಮದವರೂ ಅವರು ಊರೊಳಗೆ ಹೋಗುವುದಕ್ಕೆ ಬಿಡುತ್ತಿಲ್ಲ. ಹೀಗಾಗಿ, ಹೊಲ–ಗದ್ದೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೇ ನಡೆದುಕೊಂಡು ಹೋಗುತ್ತಿದ್ದೇವೆ. ನಾವು ಮಹಾರಾಷ್ಟ್ರದಿಂದ ಬಂದವರೆಂದು ಕೆಲವರು ಅಲ್ಲಲ್ಲಿ ನಮ್ಮತ್ತ ಕಲ್ಲೆಸೆದು ಓಡಿಸಿದ ಅನುಭವವೂ ಆಗಿದೆ’ ಎಂದು ಅವರು ಕಣ್ಣೀರು ಹಾಕಿದರು.

ADVERTISEMENT

‘ಗುಳೆ ಹೋಗಿದ್ದ ಬಡ ಕೂಲಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಸರ್ಕಾರವೇ ಅವರನ್ನು ಕರೆ ತಂದು ಅವರವರ ಊರು ತಲುಪಿಸುವ ವ್ಯವಸ್ಥೆ ಮಾಡಬೇಕು. ಹೊರ ರಾಜ್ಯಗಳಿಗೆ ಕೆಲಸಕ್ಕೆಂದು ಹೋಗಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡ ಧರೆಪ್ಪ ಮಾಳಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.