
ಆಲಮಟ್ಟಿ KSISF ಠಾಣೆ ಬಳಿ ಟೆಂಪೊ-ಟ್ರಾಕ್ಟರ್ ಡಿಕ್ಕಿ: 10 ಜನರಿಗೆ ಗಂಭೀರ ಗಾಯ
ವಿಜಯಪುರ: ಆಲಮಟ್ಟಿ ಜಲಾಶಯದ ಬಲಭಾಗದ ಬಾಗಲಕೋಟೆ ತಾಲ್ಲೂಕಿನ ಸೀತಮ್ಮನಗುಡ್ಡದ ಹತ್ತಿರದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ ಐಎಸ್ಎಫ್) ಪೊಲೀಸರ ವಸಾಹತು ಬಳಿ ಪ್ರವಾಸಿಗರಿದ್ದ ಟೆಂಪೊ ಹಾಗೂ ಕಬ್ಬು ತುಂಬಿದ ಟ್ರಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ್ದು, 10 ಜನರಿಗೆ ಗಂಭೀರ ಮತ್ತು 20 ಜನರು ಸಣ್ಣಪುಟ್ಟ ಗಾಯಗಳಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಸೀತಮ್ಮನಗುಡ್ಡದಲ್ಲಿನ ಲವಕುಶ ಉದ್ಯಾನ ನೋಡಿಕೊಂಡು ಆಲಮಟ್ಟಿ ಜಲಾಶಯದತ್ತ ಬರುತ್ತಿದ್ದ ಪ್ರವಾಸಿಗರ ಟೆಂಪೊ, ಚಾಲಕನ ನಿಯಂತ್ರಣಕ್ಕೆ ಬಾರದೇ ರಸ್ತೆಯ ಎದುರು ಬರುತ್ತಿದ್ದ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟೆಂಪೊ ಸಂಪೂರ್ಣ ನಜ್ಜುಗುಜ್ಜಾಗಿ ಉರುಳಿ ಬಿದ್ದಿದೆ. ಪರಿಣಾಮ 30 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರೂ ಟೆಂಪೋ ಪ್ರಯಾಣಿಕರು, ಅವರೆಲ್ಲರೂ ಯಾದಗಿರ ಜಿಲ್ಲೆ ಸುರಪುರ ತಾಲ್ಲೂಕಿನ ಜೈನಾಪುರ ಹಾಗೂ ಕಿರಿದಳ್ಳಿ ಗ್ರಾಮದವರು.
ಈ ಎರಡು ಗ್ರಾಮದ 30 ಜನರು ಮೂರು ದಿನದ ಹಿಂದೆ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಟೆಂಪೊದಲ್ಲಿ ಹೋಗಿದ್ದರು. ದೇವಿಯ ದರ್ಶನದ ನಂತರ ಸೋಮವಾರ ಆಲಮಟ್ಟಿಗೆ ಬಂದು, ಉದ್ಯಾನ ವೀಕ್ಷಿಸಿ ಮರಳಿ ತಮ್ಮೂರಿಗೆ ಸೋಮವಾರ ರಾತ್ರಿ ಹೊರಡಬೇಕಿತ್ತು. ಲವಕುಶ ಉದ್ಯಾನದಿಂದ ಆಲಮಟ್ಟಿ ಜಲಾಶಯದತ್ತ ಬರುವಾಗ ಭಾರಿ ಇಳಿಜಾರು ಇದ್ದು, ಅಲ್ಲಿ ಟೆಂಪೊ ನಿಯಂತ್ರಣಕ್ಕೆ ಬಾರದೇ ಈ ಅಪಘಾತ ಸಂಭವಿಸಿದೆ.
ಸ್ಪಂದಿಸಿದ ಕೆಎಸ್ಐಎಸ್ಎಫ್ ಸಿಬ್ಬಂದಿ
ಅಪಘಾತ ಆದ ಸ್ಥಳದ ಹತ್ತಿರವೇ ಇರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ ಐಎಸ್ ಎಫ್) ಸಿಬ್ಬಂದಿ, ತಕ್ಷಣವೇ ಗಾಯಾಳುಗಳನ್ನು ಹೊರಕ್ಕೆ ತೆಗೆದರು. ಉರುಳಿ ಬಿದ್ದ ಟೆಂಪೊದಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳು ರಕ್ಷಣೆಗಾಗಿ ಚೀರುತ್ತಿದ್ದರು. ಅವರನ್ನು ಹೊರಕ್ಕೆ ತೆಗೆಯಲು ಪೊಲೀಸರು ಹರಸಾಹಸಪಟ್ಟರು. ಸ್ಥಳೀಯರು ನೆರವಾದರು.
ಕೆಲವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಪೊಲೀಸರು ನೀಡಿದರು. ಟೆಂಪೊದಲ್ಲಿದ್ದ ಗಾಯಾಳುಗಳನ್ನು ಹೊರಕ್ಕೆ ತೆಗೆಯುವಷ್ಟರಲ್ಲಿಯೇ ಅಂಬುಲೆನ್ಸ್ ಸಂಪರ್ಕಿಸಿದ್ದ ಕೆಲವರು, ಬಾಗಲಕೋಟೆ, ಕೂಡಲಸಂಗಮ, ತೆಲಗಿ, ಕಾಳಗಿ ಮತ್ತೀತರ ಕಡೆಯಿಂದ ಅಂಬುಲೆನ್ಸ್ಗಳು ಘಟನಾ ಸ್ಥಳಕ್ಕೆ ತಕ್ಷಣ ಬಂದವು. ಗಾಯಾಳುಗಳೆಲ್ಲರನ್ನು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು. ಕೆಎಸ್ಐಎಸ್ಎಫ್ ಇನ್ಸ್ಪೆಕ್ಟರ್ ಶಿವಲಿಂಗ ಕುರೆನ್ನವರ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಪೊಲೀಸರು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು. ಅಪಘಾತದ ನಂತರ ಎರಡು ಬದಿ ಸಂಚಾರ ದಟ್ಟಣೆ ಹೆಚ್ಚಿತ್ತು. ಕ್ರೇನ್ ತರಿಸಿ ಟೆಂಪೊವನ್ನು ಎತ್ತಿ ಬೇರೆಡೆ ಸ್ಥಳಾಂತರಿಸಿ ಸಂಚಾರ ದಟ್ಟಣೆಯನ್ನು ಮುಕ್ತಗೊಳಿಸಿದರು.
ಅಪಘಾತದ ರಭಸಕ್ಕೆ ಟೆಂಪೊದಲ್ಲಿದ್ದ ಪ್ರಯಾಣಿಕರ ವಸ್ತುಗಳೆಲ್ಲವೂ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತೀವ್ರವಾಗಿ ಗಾಯಗೊಂಡ ಸರಸ್ವತಿ ಮಲ್ಲಪ್ಪ ದೊಡಮನಿ (35), ಹಣಮವ್ವ ದೇವೇಂದ್ರಪ್ಪ ವಾಲೀಕಾರ (50), ಗೌತಮ ವಾಲೀಕಾರ (10), ಭಾಗಮ್ಮ ವಾಲೀಕಾರ (17) ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ ಸತೀಶಕುಮಾರ ತಿಳಿಸಿದರು. ಆರು ಜನರಿಗೆ ಮೂಳೆ ಮುರಿತ ಆಗಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.