ಕೊಲ್ಹಾರ: ಈ ನಾಡಿನಲ್ಲಿ ಮೊದಲು ಸಮಾಜದಲ್ಲಿ ಸಮತಾಭಾವ ಬೆಳೆಸುತ್ತಾ ಉತ್ತಮ ಶಿಕ್ಷಣ ನೀಡಿ, ನಾಡಿನ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬರುವಲ್ಲಿ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರ ಎಂದು ಉಜ್ಜಯಿನಿಯ ಡಾ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪಟ್ಟದೇವರು ಹಿರೇಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸದ್ಧರ್ಮ ಸಮಾರಂಭ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪೋಷಕರ ಮೇಲಿದೆ ಎಂದರು.
ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಆಶೀರ್ವಚನ ನೀಡುತ್ತಾ ನಮ್ಮ ಬದುಕಿನಲ್ಲಿ ನಾಲ್ಕು ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮೊದಲನೇ ಮಾತು ಎಲ್ಲ ಕಡೆ ದೇವರು ಇದ್ದಾನೆ ಎಂದು ತಿಳಿದು ಕೆಟ್ಟ ಕೆಲಸ ಮಾಡಬಾರದು, ಎಲ್ಲರಿಗೂ ಸಾವು ಇದೆ ಎಂಬುದನ್ನು ದಿನಬೆಳಗಾದರೆ ನೆನಪಿಸಬೇಕು, ಮರೆಯುವ ಎರಡು ಮಾತುಗಳು ದಾನ ಮಾಡಿದ್ದು ಮತ್ತು ನಿಮಗೆ ಕೆಡು ಮಾಡಿದವರನ್ನು ಮರೆಯಬೇಕು ಎಂದು ತಿಳಿದರೆ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದು ತಿಳಿಸಿದರು.
ಈ ನಾಡಿನಲ್ಲಿ ತ್ರಿವಿಧ ದಾಸೋಹ ಮಾಡಿ ನಾಡು ಕಟ್ಟುವಲ್ಲಿ ಈ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರ ಎಂದು ತಿಳಿಸಿದರು.
ಸಾನಿಧ್ಯ ವಹಿಸಿ ಕಾಶಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆರ್ಶಿವಚನ ನೀಡಿದರು. ಅಧ್ಯಕ್ಷತೆಯನ್ನು ಸಚಿವ ಶಿವಾನಂದ.ಎಸ್ ಪಾಟೀಲ, ನೇತೃತ್ವವನ್ನು ಪಟ್ಟದೇವರು ಹಿರೇಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಕೊಡೆಕಲ್ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಯರನಾಳದ ಸಂಗನಬಸವ ಸ್ವಾಮೀಜಿ, ಮಸೂತಿಯ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಅತಿಥಿಗಳಾಗಿ ಸೋಮನಗೌಡ ಪಾಟೀಲ, ಕಲ್ಲು ದೇಸಾಯಿ, ವಿನೀತ ದೇಸಾಯಿ, ಬಿ.ಯು ಗಿಡ್ಡಪ್ಪಗೋಳ, ಶ್ರೀಶೈಲ ಪತಂಗಿ, ಆರ್.ಬಿ ಪಕಾಲಿ, ಟಿ.ಟಿ ಹಗೇದಾಳ, ಸಿ.ಎಸ್ ಗಿಡ್ಡಪ್ಪಗೋಳ, ಶಶಿಧರ ದೇಸಾಯಿ, ಸಿ.ಎಂ ಗಣಕುಮಾರ, ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ಬಾಬು ಭಜಂತ್ರಿ ಅಲ್ಲಾಭಕ್ಷ ಬಿಜಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.