ADVERTISEMENT

ಬಿಸಿಯೂಟದ ಅಕ್ಕಿ, ಬೇಳೆ ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 15:34 IST
Last Updated 22 ಅಕ್ಟೋಬರ್ 2022, 15:34 IST
ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಳವು ಮಾಡಿ ಸಾಗಿಸುತ್ತಿರುವಾಗ ವಶಪಡಿಸಿಕೊಂಡಿರುವ ಬಿಸಿಯೂಟದ ಅಕ್ಕಿ, ಬೇಳೆ, ನಗದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ವೀಕ್ಷಿಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಳವು ಮಾಡಿ ಸಾಗಿಸುತ್ತಿರುವಾಗ ವಶಪಡಿಸಿಕೊಂಡಿರುವ ಬಿಸಿಯೂಟದ ಅಕ್ಕಿ, ಬೇಳೆ, ನಗದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ವೀಕ್ಷಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯ ಹಿಟ್ನಳ್ಳಿ, ಬುರಾಣಪುರ, ಇಟ್ಟಂಗಿಹಾಳ, ಬಬಲೇಶ್ವರ, ಸಿಂದಗಿ, ಆಲಮೇಲ ಶಾಲೆಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ ಮಕ್ಕಳ ಬಿಸಿಯೂಟದ ಅಕ್ಕಿ, ಬೇಳೆಯನ್ನು ಕದ್ದು, ಅದನ್ನು ಬೇರೆಡೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಿಸಿಯೂಟ ಅಡುಗೆ ಸಾಮಾನು ಕಳವು ಪ್ರಕರಣಕ್ಕೆ (13 ಪ್ರಕರಣ) ಸಂಬಂಧಿಸಿದಂತೆವಾಹನ ಚಾಲಕರಾದ ಕನ್ನಾಳದ ಶರ್ಪಭೂಷಣ ದೊಡಮನಿ(22), ಕೋರವಾರದ ಶ್ರೀಕಾಂತ ಕಟ್ಟಿಮನಿ(22), ಕೋರವಾರದ ಮಲ್ಲಿಕಾರ್ಜುನ ಮೋಪಗಾರ(21), ಸೇಗುಣಸಿಯ ಸಂತೋಷ ಹೊಸಕೋಟಿ(19), ಕೋರವಾರದ ಸಂಜೀವಪ್ಪ ಮ್ಯಾಗೇರಿ(22), ಸಚಿನ್‌ ಹುಣಶ್ಯಾಳ(22) ಹಾಗೂ ಕದ್ದ ಮಾಲನ್ನು ಖರೀದಿಸಿದ ಮಿಚನಾಳದ ರಾಹುಲ ಪವಾರ(33) ಮತ್ತು ವಿಜಯಪುರ ನಗರದ ಗಣಪತಿ ಗುಡಿ ಹತ್ತಿರದ ನಾಗರಾಜ ಉಪ್ಪನ(41) ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಆರೋಪಿಗಳಿಂದ ₹2.70 ಲಕ್ಷ ಮೌಲ್ಯದ50 ಕ್ವಿಂಟಾಲ್‌ ಅಕ್ಕಿ, ₹2.24 ಲಕ್ಷ ಮೌಲ್ಯದ 15 ಕ್ವಿಂಟಾಲ್‌ ತೊಗರಿ ಬೇಳೆ, ₹1.06 ಲಕ್ಷ ನಗದು ಹಾಗೂ ಮೂರು ವಾಹನಗಳು ಸೇರಿದಂತೆಒಟ್ಟು ₹25 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಬಸವನ ಬಾಗೇವಾಡಿ ತಾಲ್ಲೂಕಿನ ಹಂಗರಗಿಯ ಸಚಿನ್‌ ಇಂಗಳೇಶ್ವರ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಶಾಲಾ ಸಿಬ್ಬಂದಿಯಾಗಲಿ ಅಥವಾ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಪಾತ್ರ ಇರುವ ಬಗ್ಗೆ ಆರೋಪಿಗಳ ವಿಚಾರಣೆ ಬಳಿಕ ತಿಳಿಯಬೇಕಿದೆ. ಆದರೆ, ಶಾಲೆಗಳಿಗೆ ಬಿಸಿಯೂಟ ಸಾಮಾಗ್ರಿ ಪೂರೈಕೆದಾರರು ಆರೋಪಿಗಳಿಗೆ ಮಾಹಿತಿ ನೀಡಿರುವುದು ಖಚಿತವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಅರಸಿದ್ದಿ, ಡಿಎಸ್‌ಪಿ ಸಿದ್ದೇಶ್ವರ, ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್‌ಐ ಜಿ.ಎಸ್‌.ಉಪ್ಪಾರ, ಪಿಎಸ್‌ಐ ಆರ್‌.ಎ.ದಿನ್ನಿ, ಎನ್‌.ಬಿ.ಉಪ್ಪಲದಿನ್ನಿ, ಸಿಬ್ಬಂದಿಗಳಾದ ಎಂ.ಎನ್‌.ಮುಜಾವರ, ಎಂ.ಎಚ್‌.ಬಂಕಲಗಿ, ವಿ.ಎನ್‌.ಪಾಟೀಲ, ಐ.ವೈ.ದಳವಾಯಿ, ಎ.ಎಸ್‌.ಬಿರಾದಾರ, ಎಂ.ಎಸ್‌.ಮೇಟಿ, ಬಿ.ಕೆ.ಬಾಗವಾನ, ಆರ್‌.ಎಂ.ನಾಟಿಕಾರ, ಎಚ್‌.ಎಸ್‌.ಸಣಬೆಂಕಿ, ಸಂಗಮೇಶ ಕೋಟ್ಯಾಳ, ಎಸ್‌.ಬಿ.ತೇಲಗಾಂವ, ಪರಶುರಾಮ ವಾಲಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.