ಕೊಣನೂರು: ಈಚೆಗೆ ಸುರಿದ ವರ್ಷಧಾರೆಯಿಂದ ಕೊಣನೂರು ಮತ್ತು ರಾಮನಾಥಪುರ ಹೋಬಳಿ ವ್ಯಾಪ್ತಿಯಲ್ಲಿ ಹೊಗೆಸೊಪ್ಪು ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ಕಂಗೆಟ್ಟಿದ್ದ ರೈತರ ಮೊಗದಲ್ಲೀಗ ಮಂದಹಾಸ ಮೂಡಿದ್ದು, ರೈತರು ಜಮೀನುಗಳತ್ತ ತೆರಳಿ ಕೃಷಿ ಕಾಯಕವನ್ನು ಬಿರುಸುಗೊಳಿಸಿದ್ದಾರೆ.
ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ನಾಟಿಗೆ ರಾಮನಾಥಪುರ ಭಾಗದಲ್ಲಿ ಮಳೆಯಿಲ್ಲದೆ, ಸಸಿ ಮಡಿ ಬೆಳೆಸಿದ್ದ ತಂಬಾಕು ಗಿಡಗಳು ಅತಿಯಾಗಿ ಬೆಳೆದು ಕರಿಕಡ್ಡಿ ಕಾಯಿಲೆ, ಕೀಟಬಾಧೆಗೆ ತುತ್ತಾಗಿ ನಾಶವಾಗುವ ಹಂತಕ್ಕೆ ತಲುಪಿದ್ದವು. ಕೆಲ ದಿನಗಳ ಹಿಂದೆ ಒಂದೆರೆಡು ಸಲ ಬಿದ್ದ ಮಳೆಗೆ ನಾಟಿಯಾಗಿದ್ದ ಸಸಿಗಳು ಸಹ, ಜಮೀನಿನಲ್ಲಿ ಶೀತಾಂಶವಿಲ್ಲದೆ ಬಿಸಿಲಿನ ತಾಪಕ್ಕೆ ಒಣಗುತ್ತಿದ್ದವು.
‘ಇದೀಗ ತಡವಾಗಿ ವರ್ಷಧಾರೆಯಾಗಿದ್ದು, ಸಕಾಲದಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿದೆ. ಇದರಿಂದ ಇಳುವರಿ ಪ್ರಮಾಣವೂ ತಗ್ಗಲಿದೆ. ಈ ವೇಳೆಗಾಗಲೇ ನಾಟಿ ಮುಗಿಯಬೇಕಿತ್ತು. ಕಟ್ಟೇಪುರ ನಾಲಾ ಪ್ರದೇಶದಲ್ಲಿ ನಾಟಿ ಮಾಡುವ ಸಮಯವೂ ಮೀರಿದ್ದು, ಈ ಸಲ ಅಪಾರ ರೈತರು ತಂಬಾಕು ಬೆಳೆ ನಷ್ಟ ಅನುಭವಿಸಬೇಕಾದ ಸ್ಥಿತಿ ತಲೆದೋರಿದೆ’ ಎನ್ನುತ್ತಾರೆ ಸರಗೂರಿನ ಹೊಗೆಸೊಪ್ಪು ಬೆಳೆಗಾರ ಮಂಜೇಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.