ADVERTISEMENT

ಕುಂಭಮೇಳಕ್ಕೆ ತೆರಳುತ್ತಿದ್ದ ಇಬ್ಬರ ಸಾವು: ಮುಗಿಲು ಮುಟ್ಟಿದ ಆಕ್ರಂದನ

ಕುಂಭಮೇಳಕ್ಕೆ ತೆರಳುತ್ತಿದ್ದ ಇಬ್ಬರ ಸಾವು, ಒಬ್ಬರ ಸ್ಥಿತಿ ಗಂಭೀರ

ಅಲ್ಲಮಪ್ರಭು ಕರ್ಜಗಿ
Published 26 ಫೆಬ್ರುವರಿ 2025, 6:39 IST
Last Updated 26 ಫೆಬ್ರುವರಿ 2025, 6:39 IST
ಚಡಚಣದಿಂದ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಮಹಾರಾಷ್ಟ್ರದ ದೇವಾಲಯವೊಂದರಲ್ಲಿ ತೆಗೆಸಿಕೊಂಡ ಚಿತ್ರ
ಚಡಚಣದಿಂದ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಮಹಾರಾಷ್ಟ್ರದ ದೇವಾಲಯವೊಂದರಲ್ಲಿ ತೆಗೆಸಿಕೊಂಡ ಚಿತ್ರ   

ಚಡಚಣ: ‘ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪ‍ಘಾತದಲ್ಲಿ ಚಡಚಣದ ಇಬ್ಬರು ಯಾತ್ರಾರ್ಥಿಗಳು ಮೃತ‍ಪಟ್ಟ ಘಟನೆ ಮಂಗಳವಾರ ನಸುಕಿನ 3 ಗಂಟೆಯ ಸುಮಾರಿಗೆ ಗುಜರಾತಿನ ಪೋರಬಂದರ್ ಸಮೀಪ ಜರುಗಿದೆ.

ಪಟ್ಟಣದ ಆಯಿಲ್‌ಮಿಲ್‌ ಮಾಲೀಕ ವಿಶ್ವನಾಥ ಅವಜಿ ಹಾಗೂ ಪಿಗ್ಮಿ ಏಜೆಂಟ್ ಮಲ್ಲಿಕಾರ್ಜುನ ಸದ್ದಲಗಿ ಮೃತಪ‍ಟ್ಟಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಾವನ್ನಪ್ಪಿದ ವಿಶ್ವನಾಥ ಅವಜಿ ಹಾಗೂ ಮಲ್ಲು ಸದ್ದಲಗಿ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪಟ್ಟಣದಲ್ಲಿ ನಿರವ ಮೌನ ಆವರಿಸಿಕೊಂಡಿದೆ.

ADVERTISEMENT

ನಾಗು ಅವಜಿ ಹಾಗೂ ಸಿದರಾಯ ಚಿಕ್ಕಲಕಿ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಮೂರ್ನಾಲ್ಕು ಜನರನ್ನು ಹೊರತುಪಡಿಸಿದರೆ, ಉಳಿದವರಿಗೆ ಚಿಕ್ಕ ಪುಟ್ಟ ಹಾಗೂ ಗಂಭೀರ ಗಾಯಗಳಾಗಿವೆ. ಇವರೆಲ್ಲರನ್ನೂ ಪೋರಬಂದರಿನ ಖಾಸಗಿ ಆಸ್ಪತ್ರಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

‘ಫೆ.21ರಂದು ಚಡಚಣದಿಂದ 17 ಜನರಿದ್ದ ತಂಡ ಪ್ರಯಾಣ ಆರಂಭಿಸಿತ್ತು. ಮಹಾರಾಷ್ಟ್ರದ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ನೋಡಿಕೊಂಡು ಗುಜರಾತಿನತ್ತ ಪ್ರಯಾಣ ಬೆಳೆಸಿತ್ತು. ಗುಜರಾತಿನ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಕುಂಭ ಮೇಳದ ಕಡೆಗೆ ಸೋಮವಾರ ರಾತ್ರಿ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಪೋರಬಂದರನ ಹೊರವಲಯದಲ್ಲಿ ನಿಂತಿದ್ದ ಲಾರಿಯೊಂದರ ಹಿಂಬದಿಗೆ ನಾವು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವೆಲರ್‌ ಅಪ್ಪಳಿಸಿತು’ ಎಂದು ಸಹ ಪ್ರಯಾಣಿಕ ಸಚಿನ್‌ ಭಮಶೇಟ್ಟಿ ತಿಳಿಸಿದ್ದಾರೆ.

ಮಂಗಳವಾರ ಸಂಜೆ ವಿಧಿವಿಜ್ಞಾನ ಪರೀಕ್ಷೆ ಮುಕ್ತಾಯಗೊಂಡಿದ್ದು, ಪಾರ್ಥಿವ ಶರೀರದೊಂದಿಗೆ ಯಾತ್ರಾರ್ಥಿಗಳು ಚಡಚಣದತ್ತ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ನಸುಕಿನ ವೇಳೆ ತಲುಪುವ ಸಾಧ್ಯತೆ ಇದೆ.

ಮಲ್ಲು ಸದ್ದಲಗಿ
ವಿಶ್ವನಾಥ ಅವಜಿ
ನಾಗರಾಜ ಅವಜಿ ಅವರ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಉಳೆದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು ಎಲ್ಲರೂ ಬುಧವಾರ ರಾತ್ರಿ ಪಟ್ಟಣಕ್ಕೆ ಬರುತ್ತೇವೆ
ಸಚಿನ್‌ ಭಮಶೇಟ್ಟಿ ಪ್ರಯಾಗ್‌ರಾಜ್‌ಗೆ ಹೊರಟ ತಂಡದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.