ವಿಜಯಪುರ: ‘ಕಾಲಜ್ಞಾನ’ಕ್ಕೆ ಹೆಸರಾದ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಚಂದ್ರಗಿರಿ ಮೂಲ ಮಹಾಸಂಸ್ಥಾನ ಮಠಕ್ಕೆ ಸೋಮವಾರ ಸಾವಿರಾರು ಭಕ್ತರು ದಾಂಗುಡಿ ಇಟ್ಟಿದ್ದರು.
‘ಕೊರೊನಾ ನಿವಾರಣೆಗಾಗಿ ಐದು ಸೋಮವಾರ ಅಂಬಲಿ ನೈವೇದ್ಯ ಮಾಡಬೇಕು, ಚಪ್ಪಲಿ ಹಾಕದೇ ಬರಿಗಾಲ ಸೇವೆ ಸಲ್ಲಿಸಬೇಕು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡಬಾರದು, ಬೋಳು ತೆಂಗಿನಕಾಯಿ ಒಡೆಯಬೇಕು’ ಎಂದು ಮಠದ ಸಿದ್ದರಾಮಯ್ಯ ಹೊಳಿಮಠ ಸ್ವಾಮೀಜಿ ಅವರು ಮಠದ ಭಕ್ತರಿಗೆ ಕರೆನೀಡಿದ್ದರು.
ಸ್ವಾಮೀಜಿ ಅವರ ಹೇಳಿಕೆ ಪ್ರಕಾರ ಸುತ್ತಲಿನ ಸಾವಿರಾರು ಭಕ್ತರು ಸೋಮವಾರ ಮಠಕ್ಕೆ ಆಗಮಿಸಿ, ಅಂಬಲಿ ನೈವೇದ್ಯ ಅರ್ಪಿಸಿದರು. ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಭಕ್ತರು ಗಾಳಿಗೆ ತೂರಿದ್ದರು. ಬಹುತೇಕ ಭಕ್ತರು ಮಾಸ್ಕ್ ಧರಿಸಿರಲಿಲ್ಲ ಹಾಗೂ ಅಂತರವನ್ನು ಕಾಪಾಡಿಕೊಳ್ಳದೇ ಸರದಿಯಲ್ಲಿ ನಿಂತು ಹರಕೆ ತೀರಿಸಿದರು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಠದ ಸಿದ್ದರಾಮಯ್ಯ ಹೊಳಿಮಠ ಸ್ವಾಮೀಜಿ, ಕೊರೊನಾ ನಿವಾರಣೆಗಾಗಿ ತಮ್ಮ ತಮ್ಮ ಮನೆಯಲ್ಲೇ ಹರಕೆ ತೀರಿಸುವಂತೆ ಕೈಮುಗಿದು ವಿನಂತಿಸಿದ್ದೆ. ಆದರೆ, ಎಲ್ಲ ಭಕ್ತರು ಮಠಕ್ಕೆ ಬಂದು ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಷ್ಠೆ ಮೆರೆದಿದ್ದಾರೆ ಎಂದರು.
ರಾಯಬಾಗ, ಮುಗಳಖೇಡ, ಶೂರ್ಪಾಲಿ, ಜಮಖಂಡಿ, ಬಬಲೇಶ್ವರ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.