
ವಿಜಯಪುರ: ಮೊನ್ನೆಯಷ್ಟೇ ವಿಜಯಪುರದ ಸ್ಮಾರಕಗಳ ಸೌಂದರ್ಯವನ್ನು ಕುಂಚದಲ್ಲಿ ಅರಳಿಸಿದ್ದ ವಿದ್ಯಾರ್ಥಿಗಳು, ಭಾನುವಾರ ವಿಜಯಪುರದಲ್ಲಿ ಬದಲಾಗುತ್ತಿರುವ ಹಸಿರು ವಾತಾವರಣ ಹಸಿರು ಪಥದ ಕುರಿತ ನಿಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಶಬ್ದ ರೂಪ ನೀಡಿದರು.
ನಗರದ ಗಗನ್ ಮಹಲ್ ಉದ್ಯಾನದ ಅಂಗಳದಲ್ಲಿ ಪ್ರಾಥಮಿಕ, ಹೈಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೂರು ವಿಭಾಗಗಳಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಬಂಧ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.
ನೂರು ವರ್ಷಗಳ ಬ್ರಿಟಿಷ ದಾಖಲೆಯ ಬರೆದ ಜಿಲ್ಲೆ ಎಂದು ಹೆಸರಾಗಿದ್ದ ವಿಜಯಪುರ ಜಿಲ್ಲೆ ಪರಿಸ್ಥಿತಿ ಇದೀಗ ಬದಲಾಗಿದ್ದು, ಹಸಿರು ಕ್ರಾಂತಿ ಸದ್ದಿಲ್ಲದೇ ನಡೆಯುತ್ತಿದೆ. ಕರಾಡ ದೊಡ್ಡಿಯಂತಹ ಅನೇಕ ಪ್ರದೇಶಗಳು ಇಂದು ಹಸಿರು ಸಿರಿಯಿಂದ ಕಂಗೊಳಿಸುತ್ತಿವೆ. ವೃಕ್ಷಥಾನ್ ಕಳೆದ ಹಲವಾರು ವರ್ಷಗಳಿಂದ ಶರವೇಗ ಪಡೆದುಕೊಂಡಿದ್ದು ಕೋಟ್ಯಂತರ ಗಿಡಗಳು ಅರಳಿ ನಿಂತಿವೆ, ಈ ಎಲ್ಲ ವಿಷಯಗಳು ಆಧರಿಸಿ, ಜಿಲ್ಲೆ ಯಾವ ರೀತಿ ಪರಿಸರ ಕ್ರಾಂತಿ ನಡೆಯುತ್ತಿದೆ ಎಂಬ ಕುರಿತು ವಿದ್ಯಾರ್ಥಿಗಳು ತಮ್ಮ ವಿಚಾರಧಾರೆಯ ಸ್ಪರ್ಶದೊಂದಿಗೆ ನಿಬಂಧ ಬರೆದರು.
ಉತ್ತಮ ನಿಬಂಧಗಳಿಗೆ ಕ್ರಮವಾಗಿ ₹10 ಸಾವಿರ, ₹7 ಸಾವಿರ ಹಾಗೂ ₹5 ಸಾವಿರ ನಗದು ಬಹುಮಾನ ಘೋಷಿಸಲಾಗಿದ್ದು, ಎರಡು ಸಮಾಧಾನಕರ ಬಹುಮಾನ ಘೋಷಿಸಲಾಗಿದೆ.
‘ವೃಕ್ಷಗಳು ಪರಿಸರದ ದಿವ್ಯ ಅಂಗಗಳು, ವೃಕ್ಷಗಳಿಂದಲೇ ಜೀವ ಸಂಕುಲದ ಉಳಿವು ಸಾಧ್ಯ. ಅರಣ್ಯ ಭೂಮಿ ಹೆಚ್ಚಿಸುವ ಉದ್ದೇಶದಿಂದ ಆರಂಭಗೊಂಡ ವೃಕ್ಷಥಾನ್ ಅಭಿಯಾನ ಇಂದು ಮಹತ್ವದ ರೂಪ ಪಡೆದುಕೊಂಡಿದೆ. ಮಕ್ಕಳಿಗಾಗಿ ಹಸಿರೀಕರಣ ಜಾಗೃತಿಗಾಗಿ, ಈ ಕಾರ್ಯದ ಹಿಂದಿರುವ ಶ್ರಮದ ಕುರಿತು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ಹಿಂದೆ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಈಗ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ವೃಕ್ಷಥಾನ್ ಕೋರ್ ಕಮಿಟಿಯ ಮಹಾಂತೇಶ ಬಿರಾದಾರ ಹೇಳಿದರು.
ಸಂಘಟಕರಾದ ಅಮೀತ್ ಕುಮಾರ ಬಿರಾದಾರ, ರಮೇಶ ಬಿರಾದಾರ, ವೃಕ್ಷಥಾನ್ ಟ್ರಸ್ಟ್ನ ಪ್ರೊ.ಮುರುಗೇಶ ಪಟ್ಟಣಶೆಟ್ಟಿ, ಪ್ರವೀಣ ಚೌರ, ವಿನಯ ಕಂಚ್ಯಾಣಿ, ಶಿವಾನಂದ ಯರನಾಳ, ಸೋಮಶೇಖರ ಸ್ವಾಮಿ, ಶಿವನಗೌಡ ಪಾಟೀಲ, ಸೋಮು ಮಠ, ನವೀದ್ ನಾಗಠಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.