ದೇವರಹಿಪ್ಪರಗಿ: ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಬಂಜಾರ ಸಮುದಾಯ ಸಿದ್ಧವಾಗಿದೆ. ಆದ್ದರಿಂದ ರಮೇಶ ಜಿಗಜಿಣಗಿ ಅವರಿಗೆ ಮತ ನೀಡುವ ಮೂಲಕ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಪ್ರಕೋಷ್ಠಕಗಳ ಸಹ ಸಂಯೋಜಕ ಭೀಮಸಿಂಗ್ ರಾಠೋಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಬಂಜಾರ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಬಿಜೆಪಿ ಆಡಳಿತದಲ್ಲಿ ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ, ಸೇವಾಲಾಲರ ಜನ್ಮಸ್ಥಳ ಸೋರೆಗೊಂಡನಕೊಪ್ಪ ಅಭಿವೃದ್ಧಿಗೆ ₹ 5 ಕೋಟಿ, ಮಹಾರಾಷ್ಟ್ರದ ಸೇವಾಲಾಲರ ಐಕ್ಯಸ್ಥಳ ಪೌರಾಗಢ ಅಭಿವೃದ್ಧಿಗೆ ₹ 1000 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಸಮುದಾಯ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಗಮನಾರ್ಹ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ನಾಯಕರು ಬಂಜಾರಾ ಸಮುದಾಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಸಮುದಾಯದ ವ್ಯಕ್ತಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಯಾವ ಕ್ಷೇತ್ರದಲ್ಲಿ ಸಮುದಾಯದ ವ್ಯಕ್ತಿಗೆ ಅವಕಾಶ ಕಲ್ಪಿಸಿದೆ? ಹಿಂದೆ ವಿಜಯಪುರ ಕ್ಷೇತ್ರದಿಂದ 3 ಬಾರಿ ಸ್ಪರ್ಧಿಸಲು ಅವಕಾಶ ನೀಡಿದರೂ ಸಹ ಆಯ್ಕೆಯಾಗದಂತೆ ಮಾಡಿದ್ದು ಇದೇ ಕಾಂಗ್ರೆಸ್ ನಾಯಕರು ಎಂಬುದನ್ನು ನಾವೆಲ್ಲ ಮರೆಯುವಂತಿಲ್ಲ. ಈಗ ಅಪಪ್ರಚಾರದ ಮೂಲಕ ನಮ್ಮ ಜನತೆಯಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಇದರಲ್ಲಿ ಯಶಸ್ವಿಯಾಗಲಾರರು. ಈ ಬಾರಿ ಬಿಜೆಪಿಗೆ ಪ್ರತಿಶತ 70 ರಷ್ಟು ಸಮುದಾಯದ ಮತಗಳು ದೊರೆಯುವುದು ಖಂಡಿತ. ಇದನ್ನು ಯಾರು ತಪ್ಪಿಸಲಾಗದು’ ಎಂದರು.
ಪಡಗಾನೂರ ಗ್ರಾಮದ ಸಮುದಾಯದ ಮುಖಂಡ ಬಾಳು ರಾಠೋಡ ಮಾತನಾಡಿದರು.
ವಿನೋದ ಚವ್ಹಾಣ, ಭೀಮಸಿಂಗ್ ಪವಾರ, ಧರ್ಮಸಿಂಗ್ ರಾಠೋಡ, ರಾಜಕುಮಾರ ರಾಠೋಡ, ತಾರಾಸಿಂಗ್ ರಾಠೋಡ, ಧರ್ಮು ರಾಠೋಡ, ದೀಪಲು ಜಾಧವ, ಮನೋಹರ ಚವ್ಹಾಣ, ಭೀಮು ಚವ್ಹಾಣ, ಸಾಗರ ಚವ್ಹಾಣ, ಕಿರಣ ರಾಠೋಡ, ಪ್ರಮೋದ ರಾಠೋಡ, ಲಾಲ್ ಬಹಾದ್ದೂರ ರಾಠೋಡ, ಹೇಮಂತ ರಾಠೋಡ, ಅಶೋಕ ಚವ್ಹಾಣ, ಶ್ರೀನಾಥ ರಾಠೋಡ, ಪ್ರೇಮಸಿಂಗ್ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.