ADVERTISEMENT

ವಿಜಯಪುರ: ಶೂಟೌಟ್‌ ಪ್ರಕರಣ, ಮತ್ತೊಬ್ಬ ಸಾವು

ಭೀಮಾ ತೀರದ ರಕ್ತಸಿಕ್ತ ಇತಿಹಾಸಕ್ಕೆ ಶೀಘ್ರ ತಾರ್ಕಿಕ ಅಂತ್ಯ: ಐಜಿಪಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:41 IST
Last Updated 4 ನವೆಂಬರ್ 2020, 3:41 IST
ಮಹಾದೇವ ಸಾಹುಕಾರ
ಮಹಾದೇವ ಸಾಹುಕಾರ   

ವಿಜಯಪುರ: ನಗರದ ಹೊರವಲಯದ ಕನ್ನಾಳ ಕ್ರಾಸ್‌ನ‌ ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದ ಭೀಮಾ ತೀರದ ಶೂಟೌಟ್‌ ಪ್ರಕರಣದಲ್ಲಿ ಗುಂಡೇಟಿನಿಂದ ಹಾಗೂ ಟಿಪ್ಪರ್ ಡಿಕ್ಕಿ ಹೊಡೆದುದರಿಂದ ತೀವ್ರವಾಗಿ ಗಾಯಗೊಂಡಿದ್ದ, ಕಾಂಗ್ರೆಸ್‌ ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ ಅವರ ಕಾರು ಚಾಲಕ ಲಕ್ಷ್ಮಣ ದಿಂಡೋರೆ (26) ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟರು.

ಪ್ರಕರಣದಲ್ಲಿಮೂರು ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಸಾಹುಕಾರ ಬೈರಗೊಂಡ ನಗರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಗುಂಡುಗಳನ್ನು ಹೊರತೆಗೆಯಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭದ್ರತೆ ಉದ್ದೇಶದಿಂದ ಬೈರಗೊಂಡ ಅವರನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸೋಮವಾರ ನಡೆದಿದ್ದ ಗುಂಡಿನ ದಾಳಿ ವೇಳೆ ಮಹಾದೇವ ಬೈರಗೊಂಡ ಅವರ ಮ್ಯಾನೇಜರ್ ಬಾಬುರಾಯ ಕಂಚನಾಳ ಸ್ಥಳದಲ್ಲೇ ಸಾವನಪ್ಪಿದ್ದರು.

ADVERTISEMENT

ಎಫ್‌ಎಸ್‌ಎಲ್ ತಂಡ ಪರಿಶೀಲನೆ:

ಶೂಟ್ಔಟ್ ನಡೆದ ಸ್ಥಳಕ್ಕೆ ಮಂಗಳವಾರ ಎಫ್ಎಸ್ಎಲ್ ತಂಡ ಭೇಟಿ ನೀಡಿ ಸಾಕ್ಷಾಧಾರಗಳನ್ನು ಸಂಗ್ರಹಿಸಿತು. ಸ್ಥಳದಲ್ಲಿ ಪೆಟ್ರೋಲ್ ಬಾಂಬ್, ನಂಬರ್ ಪ್ಲೇಟ್‌ ಇಲ್ಲದ ಐದು ಬೈಕುಗಳು, ಒಂದು ಟಿಪ್ಪರ್ ಹಾಗೂ ಮಾರಕಾಸ್ತ್ರಗಳು ಸಿಕ್ಕಿವೆ.

ವಾರದೊಳಗೆ ಪತ್ತೆ:

ಸ್ಥಳಕ್ಕೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ.15ರಿಂದ 20 ಜನರ ತಂಡ ಇರುವುದು ತನಿಖೆಯಿಂದ ತಿಳಿದಿದೆ. ವಿಜಯಪುರ, ಬಾಗಲಕೋಟೆ ಮತ್ತು ಕಲಬುರ್ಗಿ ಜಿಲ್ಲೆಯ ಪೊಲೀಸರು ಈಗಾಗಲೇ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ’ ಎಂದು ಐಜಿಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.