ADVERTISEMENT

ವಿಜಯಪುರ | ಕೈಗೆ ಮೇಲುಗೈ; ಮತ್ತೆ ಮುದುಡಿದ ಕಮಲ

ಸುಜಾತಾಗೆ ಜಿಲ್ಲಾ ಪಂಚಾಯ್ತಿ ಪಟ್ಟ; ಪಾಟೀಲತ್ರಯರ ಒಗ್ಗಟ್ಟಿಗೆ ಜಯ

ಬಸವರಾಜ ಸಂಪಳ್ಳಿ
Published 30 ಜೂನ್ 2020, 18:30 IST
Last Updated 30 ಜೂನ್ 2020, 18:30 IST
ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಜಾತಾ ಕಳ್ಳಿಮನಿ ಮತ್ತು ಸದಸ್ಯೆಯರು ವಿಜಯದ ಸಂಕೇತ ತೋರಿದರು
ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಜಾತಾ ಕಳ್ಳಿಮನಿ ಮತ್ತು ಸದಸ್ಯೆಯರು ವಿಜಯದ ಸಂಕೇತ ತೋರಿದರು   

ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಾದೆಗೆ ಏರಬೇಕು ಎಂಬ ಬಿಜೆಪಿ ಕೊನೆಯ ಯತ್ನವೂ ಮಂಗಳವಾರ ನಡೆದ ಚುನಾವಣೆಯಲ್ಲಿ ಫಲಪ್ರದವಾಗದೇತೀವ್ರ ಮುಖಭಂಗಅನುಭವಿಸಿತು. ಪಾಟೀಲತ್ರಯರ ಒಗ್ಗಟ್ಟಿನ ಯತ್ನಕ್ಕೆಅಧ್ಯಕ್ಷ ಸ್ಥಾನ ಮತ್ತೆ ಕಾಂಗ್ರೆಸ್‌ಗೆ ಒಲಿಯಿತು.‌

ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಅತಂತ್ರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.ಒಟ್ಟು 42 ಸದಸ್ಯ ಸ್ಥಾನ ಹೊಂದಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಅತೀ ಹೆಚ್ಚು (20) ಸ್ಥಾನಗಳನ್ನು ಹೊಂದಿದ್ದರೂ ಗದ್ದುಗೆ ಏರುವ ಕನಸು ಕೊನೆಗೂ ಈಡೇರಲಿಲ್ಲ. ಬಿಜೆಪಿಗಿಂತಕಡಿಮೆಬಲ(18) ಹೊಂದಿರುವ ಕಾಂಗ್ರೆಸ್‌ ಮೂರನೇ ಬಾರಿಗೂ ಜಯ ಗಳಿಸುವ ಮೂಲಕ ಜಿಲ್ಲಾ ಪಂಚಾಯ್ತಿಯನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು.

ಬಿಜೆಪಿಯ ಬಿಂದುರಾಯಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಕಲ್ಲಪ್ಪ ಮಟ್ಟಿ ಮತ್ತು ಜ್ಯೋತಿ ಅಸ್ಕಿ, ಜೆಡಿಎಸ್‌ನ ರಾಮು ರಾಠೋಡ, ಕವಿತಾ ವಿಲಾಸ ರಾಠೋಡಹಾಗೂ ಪಕ್ಷೇತರ ಸದಸ್ಯ ಗುರುರಾಜಪಾಟೀಲ ಅವರಿಗೆ ಬಲೆ ಬೀಸುವಲ್ಲಿ ಯಶಸ್ವಿಯಾದಕಾಂಗ್ರೆಸ್‌ನ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲಅವರುಸಾರವಾಡ ಕ್ಷೇತ್ರದ ಸದಸ್ಯೆ ಸುಜಾತಾ ಕಳ್ಳಿಮನಿ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ADVERTISEMENT

ಕಾಂಗ್ರೆಸ್‌ ಸದಸ್ಯರಾದ ಉಮೇಶ ಕೋಳ್ಕೂರ ಸೋಮವಾರ ರಾತ್ರೋರಾತ್ರಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿಸಂಚಲನ ಮೂಡಿಸಿದ್ದರು. ಅಲ್ಲದೇ, ಕಾಂಗ್ರೆಸ್‌ನ ಶಿವಶರಣ ಭೈರಗೊಂಡ ಮತ್ತು ಶಿವಯೋಗಪ್ಪ ನೇದಲಗಿ ಹಾಗೂ ಜೆಡಿಎಸ್‌ನ ಬಸನಗೌಡ ವನಕ್ಯಾಳ ಅವರನ್ನು ಸೆಳೆಯುವಲ್ಲಿ ಬಿಜೆಪಿ ಸಫಲವಾದರೂಸಹ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಪರಾಜಯವಾಗಬೇಕಾಯಿತು.‌

ಕೊನೆಯ ಅವಧಿಯ ಅಧ್ಯಕ್ಷ ಪಟ್ಟಏರಲು ಕಾಂಗ್ರೆಸ್‌ನ ಇಬ್ಬರು ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರನ್ನು ಬಿಜೆಪಿಸೆಳೆಯುವಲ್ಲಿ ಯಶಸ್ವಿಯಾದರೂ ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಎಡವಿತು. ಬಿಜೆಪಿ ಮುಖಂಡರು ಮತ್ತು ಪಕ್ಷದ ಶಾಸಕರ ನಡುವಿನ ಒಳಜಗಳದ ಪರಿಣಾಮವೇ ಕಾಂಗ್ರೆಸ್‌ಗೆ ವರವಾಯಿತು.

ಸಂಕಷ್ಟ ನಿವಾರಣೆಗೆಆದ್ಯತೆ:ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಮುಖಂಡರ ಸಹಕಾರದಿಂದ ಗೆಲುವು ಸಿಕ್ಕಿದೆ.‌ಅವಧಿ ಕಡಿಮೆ ಇದೆ. ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಜನತೆಯ ನೆರವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಸುದ್ದಿ ಮಾಧ್ಯಮ ಹೊರಗಿಟ್ಟು ಚುನಾವಣೆ‌
ವಿಜಯಪುರ:
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸುದ್ದಿ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳದಂತೆ ಬೆಳಗಾವಿ ಪ್ರಾದೇಶಕ ವಿಭಾಗದ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್‌ಸಂಪೂರ್ಣನಿರ್ಬಂಧವಿಧಿಸಿದ್ದರು.

ಚುನಾವಣೆ ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಕ್ರಿಯೆ, ಅಧಿಕಾರ ಸ್ವೀಕಾರ ಸೇರಿದಂತೆ ಯಾವೊಂದು ಪ್ರಕ್ರಿಯೆಲ್ಲೂ ಭಾಗವಹಿಸಲು ಅವಕಾಶ ನೀಡಲಿಲ್ಲ.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಲಿರುವುದಾಗಿ ವಾರ್ತಾ ಇಲಾಖೆ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಲಾಯಿತು. ಕೊನೆಯಲ್ಲಿ ಚುನಾವಣಾ ಪ್ರಕ್ರಿಯೆಯ ಮಾಹಿತಿಯನ್ನೂ ಆಯುಕ್ತರು ನೀಡದೇ ಹೊರನಡೆದರು.

ಬಸ್ಸಿಗೆ ಕಲ್ಲು; ಲಘು ಲಾಠಿ ಪ್ರಹಾರ
ಚುನಾವಣೆಗೂ ಮುನ್ನಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್‌ ಸದಸ್ಯರು ತಮ್ಮ ಜೊತೆ ಕೈಜೋಡಿಸಿದ್ದ ಬಿಜೆಪಿಯ ನಾಲ್ವರು ಸದಸ್ಯರೊಂದಿಗೆ ಖಾಸಗಿ ಬಸ್‌ನಲ್ಲಿ ಜಿಲ್ಲಾ ಪಂಚಾಯ್ತಿ ಆವರಣದೊಳಗೆ ಬರುವ ವೇಳೆ ಬಿಜೆಪಿ ಕಾರ್ಯಕರ್ತರು ತಡೆಯಲು ಯತ್ನಿಸಿದರು. ಅಲ್ಲದೇ, ಬಸ್ಸಿಗೆ ಕಲ್ಲು ತೂರಿ ಕಿಟಕಿ ಗಾಜನ್ನು ಪುಡಿಗೈದರು. ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು, ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಉದ್ರಿಕ್ತರು ತೂರಿದ ಕಲ್ಲು ತಾಗಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರಿಗೆ ಸಣ್ಣಪುಟ್ಟ ಗಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.