ತಿಕೋಟಾ: ಬಬಲೇಶ್ವರ ಗ್ರಾಮದ ರೈತ ಈರಪ್ಪ ಯಕ್ಕುಂಡಿರವರು ತಮ್ಮ ತೋಟದಲ್ಲಿ ಶುಕ್ರವಾರ ಕೊಳವೆಬಾವಿ ಕೊರೆಸುವಾಗ ಭೂಮಿಯಿಂದ ಆಕಾಶದೆತ್ತರ ಸುಮಾರು 40 ಅಡಿ ಎತ್ತರಕ್ಕೆ ನೀರು ಚಿಮ್ಮಿದೆ.
ಸತತ ಬರಗಾಲ ಪೀಡಿತ ಪ್ರದೇಶವೆಂದು ಕುಖ್ಯಾತಿಯಾದ ವಿಜಯಪುರ ಜಿಲ್ಲೆ ಈಗ ಸಂಪೂರ್ಣ ನೀರಾವರಿ ಕ್ಷೇತ್ರವಾಗಿ ಹೊಮ್ಮುತ್ತಿದೆ. ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಳವಾದ್ದರಿಂದ ಕೊಳವೆಬಾವಿ ಕೊರೆಯುವಾಗ ನೀರು ಎತ್ತರಕ್ಕೆ ಚಿಮ್ಮಿದೆ.
ರೈತ ಈರಪ್ಪ ಆರು ಎಕರೆ ಜಮೀನು ಹೊಂದಿದ್ದು, ನೀರಿಲ್ಲದೆ ಯಾವದೇ ಬೇಳೆಯನ್ನು ಮಾಡಿರಲಿಲ್ಲ. ಶುಕ್ರವಾರ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವಾಗ ಸುಮಾರು 120 ಅಡಿಗೆ ಸಣ್ಣ ಪ್ರಮಾಣದ ನೀರು ಲಭಿಸಿತು, 300 ಅಡಿಗೆ 1.5 ಇಂಚ್ ನೀರು, 425 ಅಡಿಗೆ 3 ಇಂಚ್ ನೀರು, 600 ಅಡಿಗೆ 4 ಇಂಚಿಗೂ ಹೆಚ್ಚು ನೀರು ಲಭಿಸಿತ್ತು. ನಂತರ ಕಾರಂಜಿಯಂತೆ ನೆಲದಿಂದ ನೀರು ಆಕಾಶದೆತ್ತರಕ್ಕೆ ಚಿಮ್ಮಿ ರೈತನಲ್ಲಿ ಮಂದಹಾಸ ಮೂಡಿಸಿದೆ.
ಬಬಲೇಶ್ವರ ಭಾಗದಲ್ಲಿ 1200 ಅಡಿ ಕೊಳವೆಬಾವಿ ಕೊರೆದರೂ ನೀರು ಲಭಿಸುತ್ತಿರಲಿಲ್ಲ. ಹೀಗಾಗಿ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಬೇಕಾದರೆ ನೀರಿಲ್ಲದ ಕಾರಣ ಸುಮ್ಮನೆ ಇದ್ದೆ. ಈಗ ಶಾಸಕ ಎಂ.ಬಿ.ಪಾಟೀಲರು ಈ ಕ್ಷೇತ್ರಕ್ಕೆ ಸಂಪೂರ್ಣ ನೀರಾವರಿ ಮಾಡಿದ್ದರಿಂದ ನಮ್ಮ ಜಮೀನಿನಲ್ಲಿ ಕೇವಲ 120 ಅಡಿಗೆ ನೀರು ದೊರಕುವಂತಾಗಿದೆ. ಅವರ ನೀರಾವರಿ ಕಾರ್ಯದಿಂದ ಇಂದು ನಮ್ಮ ಹೊಲದಲ್ಲಿ ನೀರು ಚಿಮ್ಮಿದೆ ಎಂದು ರೈತ ಈರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಸಕ ಎಂ.ಬಿ.ಪಾಟೀಲ ನೀರು ಚಿಮ್ಮಿದ ವಿಡಿಯೊ ದೃಶ್ಯವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ‘ಹೊಸ ವಿಜಯಪುರಕ್ಕೆ ಸುಸ್ವಾಗತ, ಜಿಲ್ಲೆಯ ಬಹುಪಾಲು ಜನರು ಈಗ ಬರದಿಂದ ಮುಕ್ತರಾಗಿದ್ದಾರೆ. ಕೆಲವು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ವಿಜಯಪುರ ಹೊಸ ಪಂಜಾಬ್ ಆಗಿದೆ. ಸಿದ್ದರಾಮಯ್ಯ ಅವರ ನಾಯಕತ್ವವು ಜಿಲ್ಲೆಯನ್ನು ಸಂಪೂರ್ಣವಾಗಿ ಬದಲಿಸಿದೆ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.