ಸಿಂದಗಿ: ಹೊಲದ ದಾರಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗ ಒತ್ತಾಯದಿಂದ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕ್ರಿಮಿನಾಶಕ ಔಷಧಿ ಡಬ್ಬಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಇಲ್ಲಿಯ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದಿದೆ.
‘ತಾಲ್ಲೂಕಿನ ಚಾಂದಕವಟೆ ಗ್ರಾಮದ ಮಹಿಳೆ ಶಾಮಲಾಬಾಯಿ ಸುಳ್ಳೊಳ್ಳಿ ಅವರು ತಮ್ಮ ಜಮೀನಿನಲ್ಲಿ ಇನ್ನೊಬ್ಬ ರೈತರಿಗೆ ದಾರಿ ನೀಡಲು ಗ್ರಾಮ ಲೆಕ್ಕಿಗ ಪಿ.ಕೆ.ಹುಡೇದ ಒತ್ತಾಯಪೂರ್ವಕವಾಗಿ ನನ್ನಿಂದ ಮತ್ತು ನನ್ನ ಮಗನಿಂದ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿ ಕ್ರಿಮಿನಾಶಕ ಔಷಧಿ ಡಬ್ಬಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಆಗ ಅಲ್ಲಿದ್ದ ಕೆಲವರು ಡಬ್ಬಿ ಕಸಿದುಕೊಂಡು ತಿಳುವಳಿಕೆ ಹೇಳಿ ಕಳಿಸಿದ್ದಾರೆ. ಮಹಿಳೆ ಮತ್ತು ಅವರ ಮಗ ಗ್ರಾಮ ಲೆಕ್ಕಿಗನ ಮೇಲೆ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ತಕರಾರು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮಹಿಳೆಯನ್ನು ನೆಲದ ಮೇಲೆ ಕೂಡಿಸಿ ವಿಚಾರಣೆ ನಡೆಸಲಾಗಿದೆ ಎಂಬ ಆರೋಪ ಮಾಡಲಾಗಿದೆ.
ಹೊಲದ ದಾರಿ ವಿಷಯವಾಗಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ 147 ಸೆಕ್ಷನ್ ಅಡಿ ಎರಡೂ ಕಡೆಯವರ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಲಾಗಿದೆ. ವಿಚಾರಣೆ ನಡೆಸಿರುವ ಬಗ್ಗೆ ಸಹಿ ಮಾಡಿಸಿಕೊಳ್ಳಲಾಗಿದೆ. ಮಹಿಳೆಯನ್ನು ನೆಲದ ಮೇಲೆ ಕುಳಿತುಕೊಳ್ಳಲು ತಿಳಿಸಿಲ್ಲ.ಪ್ರದೀಪಕುಮಾರ ಹಿರೇಮಠ, ತಹಶೀಲ್ದಾರ್ ಸಿಂದಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.