ವಿಜಯಪುರ: ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಕಣ್ಣೆದುರು ಗೋಳಾಡುವುದು, ಸಾಯುವುದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ. ಕೋವಿಡ್ ಇಷ್ಟೊಂದು ಅಪಾಯಕಾರಿ ಎಂಬುದು ತಿಳಿದಿರಲಿಲ್ಲ. ನಾನು ಆರೈಕೆ ಮಾಡಿರುವ ಎಲ್ಲರೂ ಆರೋಗ್ಯವಾಗಿ ಮನೆಗೆ ತೆರಳಿದ್ದಾರೆ ಎಂಬುದು ಖುಷಿಯ ಸಂಗತಿ. ನನ್ನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ.
ಹೀಗೆ ಹೇಳುತ್ತಾ ಭಾವುಕರಾದವರು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಎರಡು ವಾರದಿಂದ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ನಿರತವಾಗಿರುವ ಸ್ಟಾಫ್ ನರ್ಸ್ ಕಮಲಾ ಚಿಮ್ಮಲಗಿ.
ಬಹಳ ಇಷ್ಟಪಟ್ಟು ನರ್ಸಿಂಗ್ ಕೆಲಸಕ್ಕೆ ಸೇರಿದ್ದೇನೆ. ಪತಿ ಅಮಿತ್ ಚಿಮ್ಮಲಗಿ ಅವರು ಸಹ ಸ್ಟಾಫ್ ನರ್ಸ್ ಆಗಿದ್ದು, ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಇಬ್ಬರೂ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಹೋದ ವರ್ಷ ಪತಿಗೆ ನ್ಯೂಮೋನಿಯಾ ಆಗಿ ತುಂಬಾ ಬಳಲಿದ್ದರು. ಆದರೂ ಅಂಜದೆ ಕೋವಿಡ್ ಪೀಡಿತರ ಆರೈಕೆಯಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಅವರು.
ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಐವರು ಮನೆಯಲ್ಲಿದ್ದೇವೆ. ಮನೆಯಲ್ಲಿ ಇದ್ದ ಅಜ್ಜನಿಗೆಹೋದ ವರ್ಷ ಕೋವಿಡ್ ಪಾಸಿಟಿವ್ ಆಗಿತ್ತು. ಹೀಗಾಗಿ ಅವರನ್ನು ಇದೀಗ ಹಳ್ಳಿಗೆ ಕಳುಹಿಸಿದ್ದೇವೆ. ನಾವಿಬ್ಬರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದೇವೆ. ಹೀಗಾಗಿ ಧೈರ್ಯವಾಗಿದ್ದೇವೆ. ಆಸ್ಪತ್ರೆಯಿಂದ ಬಂದವರು ಪ್ರತ್ಯೇಕವಾಗಿ ಕ್ವಾರಂಟೈನ್ ಆಗುತ್ತಿಲ್ಲ. ಮನೆಯವರೊಂದಿಗೆ ಇರುತ್ತೇವೆ. ಮಕ್ಕಳು ನಮ್ಮೊಂದಿಗೆ ಹೆಚ್ಚು ಬೆರೆಯದಂತೆ ನೋಡಿಕೊಳ್ಳುತ್ತಿದ್ದೇವೆ. ನಮ್ಮಿಂದಾಗಿ ಕುಟುಂಬದವರಿಗೆ ತೊಂದರೆಯಾಗಬಾರದು ಎಂದು ಎಚ್ಚರ ವಹಿಸುತ್ತಿದ್ದೇವೆ. ದೇವರ ಮೇಲೆ ಬಾರ ಹಾಕಿದ್ದೇವೆ.
ಮುದ್ದೇಬಿಹಾಳದಲ್ಲಿ ಮೂರು ವರ್ಷ ಹಾಗೂ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಏಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಪತಿ ಅಮಿತ್ 18 ವರ್ಷದಿಂದ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ, ಒಂದಲ್ಲ, ಎರಡೆರಡು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಅನಗತ್ಯವಾಗಿ ಹೊರಗೆ ಅಡ್ಡಾಡಬೇಡಿ ಎಂದು ಸಲಹೆ ನೀಡುತ್ತಾರೆ ಸಿಸ್ಟರ್ ಕಮಲಾ ಚಿಮ್ಮಲಗಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.