ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದಲ್ಲಿ ಮೂಲಸೌಕರ್ಯ ಹಾಗೂ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಪಂಚಾಯಿತಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟಿಸಿದರು.
ವಡಗೇರಾ: ತಾಲ್ಲೂಕಿನ ತಡಿಬಿಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಮಹಿಳೆಯರು ಪಂಚಾಯಿತಿಗೆ ಬೀಗ ಜಡಿದು, ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಸಾಮಾಜಿಕ ಹೋರಾಟಗಾರ ಅನಿಲಕುಮಾರ ನಾಲ್ವಡಗಿ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತಿಪ್ಪಣ್ಣ ಎನ್.ವೈ ಲಂಡನಕರ್ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಕಳೆದ 3–4 ವರ್ಷಗಳಿಂದ ಗ್ರಾಮದ ರಸ್ತೆಗಳು ಹಾಳಾಗಿವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ಸರಿಯಾದ ವಿದ್ಯುತ್ ಸರಬರಾಜು ಇಲ್ಲ. 2022-23ರಲ್ಲಿ ನಡೆದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿ ಕಳಪೆ ಮಾಡಲಾಗಿದ್ದು, ಮನೆಗಳಿಗೆ ಸಮಪರ್ಕವಾಗಿ ನಳಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಅವರು ಮಂಗಳವಾರ ವಾರ್ಡ್ ನಂ.2 ಮತ್ತು 4ರಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ತಿಪ್ಪಣ್ಣ, ಅಂಬ್ರೇಶ, ನಾಗಪ್ಪ, ದೇವಿಂದ್ರಪ್ಪ, ಯಂಕಪ್ಪ, ಸಾಬಣ್ಣ, ಗ್ರಾಮದ ಮಹಿಳೆಯರು ಇದ್ದರು.
ಕಳೆದ ಒಂದುವರೆ ತಿಂಗಳಿನಿಂದ ಗ್ರಾಮದ ವಾರ್ಡ್ 2 ಮತ್ತು 4ರಲ್ಲಿ ಕುಡಿಯುವ ನೀರು ಸರಬರಾಜು ಇಲ್ಲದೆ ಬಡಾವಣೆಯ ನಿವಾಸಿಗಳು ನೀರಿಗೆ ಪರಿತಪಿಸುವಂತಾಗಿದೆ. ದಿನಾಲು ನೀರಿಗಾಗಿ ಕೊಡ ಹಿಡಿದು ಅಲೆಯುವುದು ಅವಿವಾರ್ಯವಾಗಿದೆತಿಪ್ಪಣ್ಣ ಎನ್.ವೈ ಲಂಡನಕರ್ ಜಿಲ್ಲಾ ಸಂಚಾಲಕ ದಲಿತ ಸಂಘರ್ಷ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.