ಕೆಂಭಾವಿ: ಬೇಸಿಗೆ ಬೆಳೆ ಬೆಳೆಯಲು ಕೃಷ್ಣಾ ಅಚ್ಚುಕಟ್ಟು ಪ್ರದೇಶ ನಾರಾಯಣಪುರ ಎಡದಂಡೆ ಕಾಲುವೆಗೆ ಮಾ.10ರ ವರೆಗೆ ನೀರು ಹರಿಸುವುದಾಗಿ ತಿಳಿಸಿದ್ದರೂ, ಇದೀಗ ಮಾ.1 ರಿಂದಲೇ ನೀರು ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಮಾ.10ರ ವರೆಗೆ ನೀರು ಹರಿಸಬೇಕು. ಅದರಂತೆ ಪ್ರತಿ ತಿಂಗಳು ವಾರಾಬಂದಿ ಕೂಡಾ ಮಾಡಲಾಯಿತು. ಮಾರ್ಚ್ ಅಂತ್ಯದವರೆಗೆ ನೀರು ಹರಿಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಆದರೆ, ಮಾ.1 ರಂದೇ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರಲ್ಲಿ ಆತಂಕ ಮೂಡಿದೆ.
ಸದ್ಯ ಈ ಪ್ರದೇಶದಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಕಾಲುವೆಗೆ ನೀರು ವ್ಯರ್ಥವಾಗಿ ಹರಿಸಬಾರದೆಂದು ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಕ್ರಮ ಎಲ್ಲಿಯವರೆಗೆ ಎಂಬುದನ್ನು ಮಾತ್ರ ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ.
ನವೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಅಧಿಕಾರಿಗಳು ದ್ವಂದ್ವ ನಿಲುವು ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತ ನಾಗಪ್ಪ ತೆಗ್ಗೆಳ್ಳಿ ದೂರಿದ್ದಾರೆ. ಸರ್ಕಾರ ರೈತರ ಹಿತ ಕಾಪಾಡಲು ಮಾರ್ಚ್ ಅಂತ್ಯದವರೆಗೆ ನೀರು ಹರಿಸುವಂತೆ ಅವರು ಒತ್ತಾಯಿಸಿದ್ದಾರೆ.
ನಾರಾಯಣಪುರ ಎಡದಂಡೆ ಕಾಲುವೆ ಹಾಗೂ ಶಾಖಾ ಕಾಲುವೆಗಳು ಪದೇ ಪದೇ ಕುಸಿಯುತ್ತಿರುವುದರಿಂದ ಯಾದಗಿರಿ, ಗುಲ್ಬರ್ಗ ಮತ್ತು ವಿಜಾಪುರ ಜಿಲ್ಲೆಗಳ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಶಾಶ್ವತ ದುರಸ್ತಿಗಾಗಿ ಕೇಂದ್ರ ಸರ್ಕಾರ ₨3,752 ಕೋಟಿ ಅನುದಾನ ನೀಡಿದೆ. ಅದರಲ್ಲಿ ಮೊದಲ ಹಂತದಲ್ಲಿ ₨1,500 ಕೋಟಿ ಕಾಮಗಾರಿಯ ಟೆಂಡರ್ ಕರೆದಿದ್ದು. ಲೈನಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿಯನ್ನು ಪ್ಯಾಕೇಜ್ಗಳಲ್ಲಿ ಟೆಂಡರ್ ಕರೆಯಲಾಗಿದ್ದು, 90 ದಿನದಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆಗಡುವು ನೀಡಲಾಗಿದೆ.
ಗುಣಮಟ್ಟದ ಕಾಮಗಾರಿಗೆ ಆಗ್ರಹ: ಎಡದಂಡೆ ನಾಲೆಗೆ ಈ ವರ್ಷ ಬೇಸಿಗೆ ಬೆಳೆಗೆ ನೀರು ಬಿಡದ ಕಾರಣ ನೀರಾವರಿ ಪ್ರದೇಶದಲ್ಲಿ ಭತ್ತದ ನಾಟಿ ಮಾಡಿಲ್ಲ. ಕಾಲುವೆ ನವೀಕರಣ ಕಾಮಗಾರಿ 90 ದಿನಗಳಲ್ಲಿ ಮುಗಿಯಬೇಕು. ಆದರೆ, 90 ದಿನಗಳಲ್ಲಿ ಮಾಡಿ ಮುಗಿಸುವ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ವಲಯ ಘಟಕದ ಅಧ್ಯಕ್ಷ ನಾಗರಡ್ಡಿ ಅಮ್ಮಣ್ಣ ದೊರಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.