ADVERTISEMENT

ಕಾನೂನು ಅರಿವು ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2012, 10:05 IST
Last Updated 29 ಡಿಸೆಂಬರ್ 2012, 10:05 IST
ಯಾದಗಿರಿಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ನ್ಯಾಯಾಧೀಶರಾದ ಜಿ.ಎಸ್. ದೇಶಪಾಂಡೆ ಉದ್ಘಾಟಿಸಿದರು. ಚಂದ್ರಕಾಂತ ಹಿಳ್ಳಿ, ಬಾಬು ದೋಖಾ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಡಿ.ಡಿ. ಒಡೆಯರ್ ಮುಂತಾದವರು ಇದ್ದರು
ಯಾದಗಿರಿಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ನ್ಯಾಯಾಧೀಶರಾದ ಜಿ.ಎಸ್. ದೇಶಪಾಂಡೆ ಉದ್ಘಾಟಿಸಿದರು. ಚಂದ್ರಕಾಂತ ಹಿಳ್ಳಿ, ಬಾಬು ದೋಖಾ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಡಿ.ಡಿ. ಒಡೆಯರ್ ಮುಂತಾದವರು ಇದ್ದರು   

ಯಾದಗಿರಿ: ಇಂದು ಹಲವಾರೂ ಕಂಪೆನಿಗಳು ತಯಾರಿಸುತ್ತಿರುವ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅವುಗಳನ್ನು ತೆಗೆದುಕೊಳ್ಳುವಾಗ ಕಡ್ಡಾಯವಾಗಿ ರಸೀದಿ ಕೇಳಿ ಪಡೆಯಿರಿ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಜಿ.ಎಸ್. ದೇಶಪಾಂಡೆ ಹೇಳಿದರು.

ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಜು ಹಾಗೂ ಗ್ರ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಾರಾಟವಾಗುತ್ತಿರುವ ನಾನಾ ಕಂಪೆನಿಗಳ ಔಷಧಿಗಳಲ್ಲಿ ಬಿಲ್ ಪಡೆಯದೇ ಇದ್ದ ಗ್ರಾಹಕರು ಹಲವಾರು ಬಾರಿ ಮೋಸ ಹೋಗಿರುವ ಉದಾಹರಣೆಗಳಿವೆ. ಬಿಲ್ ಪಡೆಯುವುದರಿಂದ ವಂಚನೆಗೊಳಗಾಗುವ ಸಂಭವ ಕಡಿಮೆ ಎಂದು ಹೇಳಿದರು.

ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವಾಗ, ಉತ್ಪಾದನೆಯ ಗುಣಮಟ್ಟ ಮತ್ತು ದರವನ್ನು ಪರೀಕ್ಷೆ ಮಾಡುವುದು ಅವಶ್ಯಕ. ತೂಕ ಮತ್ತು ದರದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ, ಕಂಪೆನಿ ವಿರುದ್ಧ ದೂರು ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಸ್ತುಗಳು, ಪದಾರ್ಥಗಳ ಸೇವೆ, ಆಯ್ಕೆ ಮಾಡಿಕೊಳ್ಳುವ ಹಕ್ಕು ಗ್ರಾಹಕರದಾಗಿದ್ದು, ದೋಷಯುಕ್ತ ಪದಾರ್ಥಗಳ ಸೇವೆಯಿಂದ ಉಂಟಾಗುವ ಹಾನಿಯ ಪರಿಹಾರವನ್ನೂ ಪಡೆಯುವ ಹಕ್ಕು ಗ್ರಾಹಕರದ್ದಾಗಿದೆ. ಅದರಲ್ಲೂ ಮಹಿಳೆಯರು ಈ ಕಾನೂನನ್ನು ತಿಳಿದುಕೊಂಡು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಜಾಗೃತಿ ಹೊಂದಬೇಕು ಎಂದು ಹೇಳಿದರು.

ಔಷಧ ಮತ್ತು ಸಿದ್ಧ ವಸ್ತುಗಳನ್ನು ಖರೀದಿಸುವಾಗ ಅದರ ತಯಾರಿಕೆಯ ಮತ್ತು ನಿಗದಿತ ಬೆಲೆ ಅರಿತುಕೊಳ್ಳುವುದು ಅವಶ್ಯಕ. ಇತ್ತೀಚಿಗೆ ಮಕ್ಕಳ ಕೈಯಲ್ಲಿ ಸಾಕಷ್ಟು ಹಣ ಓಡಾಡುವುದರಿಂದ ಅವರಿಗೆ ಗ್ರಾಹಕರ ಕಾನೂನಿನ ಅರಿವು ನೀಡಲು ಪಾಲಕರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಮನವಿ ಮಾಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಹಿಳ್ಳಿ ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ.ಜಿಲಾನಿ, ಸಹಾಯಕ ಆಯುಕ್ತ ಬಿ.ಪಿ.ವಿಜಯ, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕ ಟಿ.ಮಹ್ಮದ್, ಗಂಜ್ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಡಿ.ಡಿ. ಒಡೆಯರ್, ಪಿ.ಮಹ್ಮದ್, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಸಂತೋಷ ಕುಮಾರ, ಜಿ.ಎನ್. ನರಸಿಂಹಮೂರ್ತಿ ಮುಂತಾದವರು ವೇದಿಕೆಯಲ್ಲಿದ್ದರು.

ನಾಟಕ ಪ್ರದರ್ಶನ: ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಗ್ರಾಹಕರ ಹಕ್ಕುಗಳ ಕುರಿತು ನಾಟಕ ಪ್ರದರ್ಶನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.