ADVERTISEMENT

ಗುತ್ತಿ ಬಸವೇಶ್ವರ ಏತ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:55 IST
Last Updated 11 ಅಕ್ಟೋಬರ್ 2011, 8:55 IST

ಕೆಂಭಾವಿ: ಗುತ್ತಿ ಬಸವೇಶ್ವರ ಏತ ನೀರಾವರಿಯ ಮೋಟಾರ್‌ಗಳು ಕೆಟ್ಟು ರೈತರು ತೊಂದರೆ ಅನುಭವಿಸುತ್ತಿದ್ದರೂ, ಬೆಂಗಳೂರಿನಲ್ಲಿ ಸೋಮವಾರ ನಡೆದ ಕೆಬಿಜೆಎನ್‌ಎಲ್‌ನ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿಲ್ಲ ಎಂದು ತಿಳಿದು ಬಂದಿದೆ.

41 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗೆ ನೀರು ನೀಡುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚಿಸಬೇಕಾಗಿತ್ತು ಇದನ್ನು ಬಿಟ್ಟು ಇದೇ ಯೋಜನೆಯ ಹೊಸ ಕಾಮಗಾರಿಗೆ ಅನುಮತಿ ನೀಡಿದರೇ ಹೊರತಾಗಿ, ಸದ್ಯ ಕೆಟ್ಟು ಹೋಗಿರುವ ಮೋಟಾರ್‌ಗಳ ದುರಸ್ತಿಯ ಬಗ್ಗೆ ಯಾವ ಅಧಿಕಾರಿಗಳಾಗಲಿ, ಸಲಹಾ ಸಮಿತಿ ಸದಸ್ಯರಾಗಲಿ ಚಕಾರ ಎತ್ತಲ್ಲಿಲ್ಲ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಹೀಗಾದರೆ ಈಸಮಸ್ಯೆ ಬಗೆಹರಿಯುವ ಬಗ್ಗೆ ಯಾವುದೆ ಲಕ್ಷಣಗಳು ಕಾಣುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೋಟಾರ್ ದುರಸ್ತಿ ಬಗ್ಗೆ ಅಧಿಕಾರಿಗಳಲ್ಲಿ ಭಿನ್ನಭಿಪ್ರಾಯಗಳಿದ್ದ ಬಗ್ಗೆ ತಿಳಿದು ಬಂದಿದ್ದು, ಇದ್ದ ಆರು ಮೋಟಾರ್‌ಗಳು ಸ್ಥಗಿತಗೊಂಡಿವೆ. ಇದರಲ್ಲಿ ಎರಡು ಮೋಟಾರ್‌ಗಳು ಕೆಟ್ಟು ಎರಡು ವರ್ಷಗಳಾಗಿವೆ. ಆದರೂ ಅಧಿಕಾರಿಗಳು ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ರೈತರು ದೂರುವಂತಾಗಿದೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ. ಇದ್ದ ಯೋಜನೆಗೆ ಹಣ ಬಿಡುಗಡೆ ಮಾಡದೇ ಮತ್ತೊಂದು ಯೋಜನೆಗೆ ರೂ. 5.31 ಕೋಟಿ ತಾಂತ್ರಿಕ ಮಂಜೂರಾತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಶಾಸಕರ ಆಕ್ರೋಶ: ಗುತ್ತಿ ಬಸವೇಶ್ವ ಏತ ನೀರಾವರಿ ಯೋಜನೆ ಮೋಟಾರ್‌ಗಳು ಕೆಟ್ಟು ನಿಂತಿರುವುದಕ್ಕೆ ಅಧಿಕಾರಿಗಳೇ ಹೊಣೆ. ಯೋಜನೆ ಪೂರ್ಣಗೊಂಡು ನಾಲ್ಕು ವರ್ಷಗಳಾದರೂ ಉದ್ಘಾಟನೆ ಮಾಡದೇ ಸರ್ಕಾರವೇ ಮೊದಲು ನಿರ್ಲಕ್ಷ್ಯ ತೋರಿದೆ. ಇದರಿಂದಾಗಿ ರೈತರು ಪರಿತಪಿಸುವಂತಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದಲೇ ಎಲ್ಲ ಮೋಟಾರ್‌ಗಳು ಸುಟ್ಟು ಹೋಗಿವೆ. ಹೀಗಾದರೇ ರೈತರ ಪರಿಸ್ಥಿತಿ ಹೇಗೆ? ಸದ್ಯಕ್ಕೆ ಬೆಳೆಗಳಿಗೆ ನೀರು ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಮೋಟಾರ್‌ಗಳು ಕೆಟ್ಟಿದ್ದು, ಸರ್ಕಾರ ಯುದ್ಧೋಯಲ್ಲಿ ಮೋಟಾರ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಆದರೆ ಈ ಲಕ್ಷಣಗಳು ಕಾಣುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.