ಯಾದಗಿರಿ: ಸಮೀಪದ ವಡಗೇರಾದ ಗ್ರಾಮದಲ್ಲಿ ಪಂಚಾಯಿತಿ ಇದ್ದರೂ ಇಲ್ಲದಂತಾಗಿದೆ. ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮದ ಒಂದನೇ ಬ್ಲಾಕ್ನ ಜನರು ದೂರಿದ್ದಾರೆ.
ಪಂಚಾಯಿತಿ, ವಿಶೇಷ ತಹಸೀಲ್ದಾರ್ ಕಾರ್ಯಾಲಯ, ಪ್ರೌಢಶಾಲೆಗೆ, ಪ್ರಾಥಮಿಕ ಶಾಲೆಗೆ ಇದೇ ರಸ್ತೆಯ ಮೂಲಕ ಹೋಗಬೇಕು. ವಿದ್ಯಾರ್ಥಿಗಳು, ಹೊಲಸು ನೀರು ರಸ್ತೆಯ ಮೇಲೆ ನಿಂತಿರುವುದರಿಂದ ಅಲ್ಲಲ್ಲಿ ಗುಂಡಿಗಳಾಗಿವೆ. ಅದರಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರ ಜೊತೆ ರೋಗ ರುಜಿನುಗಳ ಹರಡುವ ಭೀತಿ ಕಾಡುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.
ಗ್ರಾಮದ ಒಂದನೇ ಬ್ಲಾಕ್ನ ಚಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ಇದರಿಂದಾಗಿ ಚರಂಡಿಯಲ್ಲಿ ಹರಿಯುವ ನೀರು ರಸ್ತೆಯ ಮೇಲೆ ಬರುತ್ತಿದೆ. ಚರಂಡಿಯ ನೀರು ಮನೆಗೆ ನುಗ್ಗಿದ ಉದಾಹರಣೆ ಗಳು ಇವೆ. ಬಡಾವಣೆಯ ತುಂಬ ಕಸದ ರಾಶಿ ತುಂಬಿದೆ. ಸ್ವಚ್ಛತೆಯೇ ಇಲ್ಲದಂತಾಗಿದೆ ಎಂದು ನಿವಾಸಿಗಳು ದೂರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಚರಂಡಿಯ ನೀರು ರಸ್ತೆಯ ಮೇಲೆ ಹರಿಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.