ADVERTISEMENT

ನೀರು ಸ್ಥಗಿತ: ಎಂಜಿನಿಯರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:17 IST
Last Updated 24 ಮಾರ್ಚ್ 2014, 9:17 IST

ಹುಣಸಗಿ: ನಾರಾಯಣಪುರ ಎಡ­ದಂಡೆ ಮುಖ್ಯ ಕಾಲುವೆಗೆ ಶನಿವಾರ ರಾತ್ರಿ ನೀರು ಸ್ಥಗಿತಗೊಳಿಸಿದ ಹಿನ್ನೆಲೆ­ಯಲ್ಲಿ ಭಾನುವಾರ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಮುಖಂ­ಡ­ರೊಂದಿಗೆ ನಾರಾಯಣಪುರಕ್ಕೆ ತೆರಳಿ ಕೃಷ್ಣಾ ಭಾಗ್ಯ ಜಲ ನಿಮಗದ ಅಧಿಕಾರಿ­ಗಳನ್ನು ಭೇಟಿ ಮಾಡಿದರು.

ರೈತರ ಬೆಳೆಗಳಿಗೆ ಒಂದು ವಾರ ನೀರಿನ ಅವಶ್ಯಕತೆ ಇದ್ದು ರೈತರ ಹಿತ ಕಾಪಾಡಲು ಮಾರ್ಚ್‌ ಅಂತ್ಯದ­ವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಮುಖ್ಯ ಎಂಜಿನಿಯರ್ ಎನ್.­ಕ್ಷೇತ್ರ­ಪಾಲ್ ಅವರಿಗೆ ಮನವಿ ಮಾಡಿದರು.

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕಾಳು ಕಟ್ಟುತ್ತಿದೆ. ಈ ಹಂತದಲ್ಲಿ ನೀರು ಇಲ್ಲದಿದ್ದರೇ ಸಂಪೂರ್ಣ ಬೆಳೆ ಹಾನಿಯಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಎಂಜಿನಿಯರ್ ಕ್ಷೇತ್ರಪಾಲ, ಬಸವ ಸಾಗರ ಜಲಾಶಯದಲ್ಲಿ ಕೇವಲ 1.309 ಟಿಎಂಸಿ ನೀರಿನ ಸಂಗ್ರಹವಿದೆ. ಈ ನೀರನ್ನು ಬೇಸಿಗೆಯಲ್ಲಿ 40 ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಕೃಷಿಗೆ ಬಳ­ಸುವ ನೀರನ್ನು ಸಂಪೂರ್ಣವಾಗಿ ಒದಗಿಸ­ಲಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ನೀಡಬೇಕು ಎಂದರು.

ನಂತರ ಮುಖ್ಯ ಎಂಜಿನಿಯರ್ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತ­ನಾಡಿದ ಶಾಸಕ ಆರ್‌.ವಿ.ನಾಯಕ, ರೈತರಿಗೆ ನೀರು ಒದಗಿಸಲು ಜಲ­ಸಂಪನ್ಮೂಲ ಸಚಿವ­ರೊಂದಿಗೆ ಮಾತ­ನಾಡಿದ್ದು, ಮುಖ್ಯ­ಮಂತ್ರಿಗಳೊಂದಿಗೆ ಮಾತನಾಡಿ ನೀರು ಹರಿಸಲು ಪ್ರಯತ್ನಿಸ­ಲಾಗುತ್ತಿದೆ. ಇನ್ನೆ­ರಡು ದಿನದಲ್ಲಿ ನಿರ್ಣಯ ತಿಳಿಸುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಗೋಪಾ­ಲ­ದಾಸ ಲಡ್ಡಾ, ಮುಖಂಡರಾದ  ಬಸನಗೌಡ ಯಡಿಯಾಪುರ, ಸೂಲಪ್ಪ ಕಮತಗಿ, ವಿಠ್ಠಲ್‌ ಯಾದವ, ಯಂಕೋಬ ಮಂಗಳೂರ, ರಾಜಾ ವೇಣುಗೋಪಾಲ, ಮಾರ್ತಾಂ­­ಡಪ್ಪ, ನಾಗಪ್ಪ, ಶಾಂತಪ್ಪ ಮೇಸ್ತಕ, ಅಮ­ರೇಶ, ನಾಗರಾಜ ಜೋಗುರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.