ಯಾದಗಿರಿ: ಗುರುಮಠಕಲ್ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ಆಯಾಮ ನೀಡಲು ಯುವ ಕಾರ್ಯಕರ್ತರು ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿದರು.
ತಾಲ್ಲೂಕಿನ ಕಾಳೆಬೆಳಗುಂದಿಯಲ್ಲಿ ನಡೆದ ಗುರುಮಠಕಲ್ ಕ್ಷೇತ್ರ ಮಟ್ಟದ ಜೆಡಿಎಸ್ ಯುವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಯುವಜನತೆ ಪಕ್ಷದ ಸಂಘಟನೆ, ಬೆಳವಣಿಗೆಯಲ್ಲಿ ಕ್ರೀಯಾಶೀಲವಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸುಮಾರು ನಾಲ್ಕು ದಶಕಗಳಿಂದ ಕಂದಕೂರ ಕುಟುಂಬವು ಪಕ್ಷಾತೀತವಾಗಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಇನ್ನೂ ಹೆಚ್ಚಿನ ಜನಸೇವೆಯನ್ನು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಗುರುಮಠಕಲ್ ಕ್ಷೇತ್ರದ ಶಾಸಕರ ನಿರ್ಲಕ್ಷದಿಂದಾಗಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಇದನ್ನು ಯುವ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಹೇಳಿದರು.
ಕಡತದಲ್ಲಿ ಮಾತ್ರ ಕ್ಷೇತ್ರದ ಕೆಲಸಗಳು ನಡೆದಿವೆ. ಕಣ್ಣಿಗೆ ಕಾಣಿಸುವ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಅಭಿವೃದ್ಧಿಯಿಂದ ವಂಚಿತವಾಗಿರುವ ಗುರುಮಠಕಲ್ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಲು ಜೆಡಿಎಸ್ ಪಕ್ಷ ಗೆಲುವು ಸಾಧಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್ನ ದುರಾಡಳಿತವನ್ನು ಜನರಿಗೆ ಮುಟ್ಟಿಸುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಯುವಕರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು. ಜೆಡಿಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ ನಿರುದ್ಯೋಗ ಭತ್ಯ, ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ವಿಜಾಪುರದಲ್ಲಿ ಹೇಳಿಕೆ ನೀಡಿದ್ದು, ಈ ವಿಷಯವನ್ನು ಪ್ರಣಾಳಿಕೆಯಲ್ಲೂ ಸೇರಿಸುವುದಾಗಿ ತಿಳಿಸಿದ್ದಾರೆ. ಇಂತಹ ವ್ಯಕ್ತಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷದ ಯುವ ಕಾರ್ಯಕರ್ತರು ಸಿದ್ಧತೆ ಮಾಡಬೇಕು ಎಂದು ಸಲಹೆ ಮಾಡಿದರು.
ಪಕ್ಷ ಸಂಘಟನೆಯೊಂದೇ ಉದ್ದೇಶ ಅಲ್ಲ. ಸಾಮಾಜಿಕ ಕಳಕಳಿಯಿಂದ ಆರೋಗ್ಯಕರ, ಅಭಿವೃದ್ಧಿಯುತ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಹೇಳಿದರು. ಸೈದಾಪುರ, ಬಳಿಚಕ್ರ, ಹತ್ತಿಕುಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ನೂರಾರು ಯುವಕರು ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು. ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಹಾಗೂ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವಿವಿಧ ಗ್ರಾಮಗಳಿಂದ ಸಾವಿರಾರು ಯುವಕರು ಭಾಗವಹಿಸಿದ್ದರು.
ದಾವಲಸಾಬ್, ಪಂಪನಗೌಡ, ಲಕ್ಷ್ಮಣ ಹೆರೇನೂರು, ಭೀಮರಾಯ ಬಳಿಚಕ್ರ, ಬಸವಲಿಂಗಪ್ಪ ಕ್ಯಾತನಾಳ, ಬಸವರಾಜ ಅವಂತಿ, ರಾಘವೇಂದ್ರ ನಸಲವಾಯಿ, ಬಸನಗೌಡ ಲಿಂಗೇರಿ, ಹುಸೇನಪ್ಪ ಕಾಕಲವಾರ, ಈಶ್ವರ ನಾಯಕ ಬಾಚವಾರ, ಪ್ರವೀಣ ರೆಡ್ಡಿ ಹತ್ತಿಕುಣಿ, ಸುಭಾಷ ಮಗ್ದಂಪುರ, ಅನಂತಯ್ಯ ಕಲಾಲ, ಮಲ್ಲಪ್ಪ ಮಾಲಿಪಾಟೀಲ ಇಮ್ಲಾಪುರ, ಅರುಣ ಗೌಡಗೇರಾ, ವಿರುಪಾಕ್ಷಿ ಕಿಲ್ಲನಕೇರಾ, ಬಸವರಾಜ ಹರಸೂರು, ಶಾಂತು ಯಂಪಾಡ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಬನದೇಶ ಸಂಕಿನಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ಅರುಣಿ ನಿರೂಪಿಸಿದರು. ಪ್ರಕಾಶ ಪಾಟೀಲ ಜೈಗ್ರಾಂ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.