ADVERTISEMENT

ರೂ.500 ನೀಡಿದರೆ ಮನೆಗೆ ಅಡುಗೆ ಅನಿಲ ಪೂರೈಕೆ ವಾರದಿಂದ ಸಿಲಿಂಡರ್ ಇಲ್ಲ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:04 IST
Last Updated 19 ಡಿಸೆಂಬರ್ 2012, 11:04 IST

ವಾಡಿ: ಅಡುಗೆ ಅನಿಲ ಸಿಲಿಂಡರ್‌ಗೆ ಒಂದು ತಿಂಗಳ ಮೊದಲೇ ಬುಕ್ ಮಾಡಿದರೂ ಸರಿಯಾದ ಸಮಯಕ್ಕೆ ಅನಿಲ ದೊರಕುತ್ತಿಲ್ಲ. ಮತ್ತು ಬೆಳಿಗ್ಗೆಯಿಂದಲೇ ಅನಿಲ ಅಂಗಡಿ ಮುಂದೆ ನಿಂತರೂ ಅನಿಲ ಸಿಲಿಂಡರ್ ಸಿಗುತ್ತಿಲ್ಲ. ಆದರೆ ಹೆಚ್ಚು ಹಣ ನೀಡಿದವರಿಗೆ ಮಾತ್ರ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಅಡುಗೆ ಅನಿಲಕ್ಕಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಪಟ್ಟಣದ ಕಮಲಿಬಾಬಾ ದರ್ಗಾ ಹತ್ತಿರ ಯಾದಗಿರಿ ಮುಖ್ಯ ರಸ್ತೆ ಪಕ್ಕದಲ್ಲಿರುವ ಗುರು ಗ್ಯಾಸ್ ಏಜೆನ್ಸಿಯಲ್ಲಿ ಅಡುಗೆ ಅನಿಲಕ್ಕಾಗಿ ಒಂದು ತಿಂಗಳ ಮೊದಲೇ ಬುಕ್ ಮಾಡಿದರೂ ಅನಿಲ ಸಿಗುತ್ತಿಲ್ಲ. ಕೇಳಿದರೆ ನೀವು ಸರಿಯಾಗಿ ಬುಕ್ ಮಾಡಿಲ್ಲ. ಇದರಿಂದ ನಿಮ್ಮ ಹೆಸರಿನ ಅನಿಲ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕ ವಿರಭದ್ರಪ್ಪ ನೋವು ತೋಡಿಕೊಂಡರು.

ಒಂದು ಅನಿಲ ಸಿಲಿಂಡರ್ ದರ 432 ರೂಪಾಯಿ ಇದೆ. ಆದರೆ 500 ರೂಪಾಯಿ ಕೊಟ್ಟವರಿಗೆ ಮಾತ್ರ ಸಿಲಿಂಡರ್ ಬುಕ್ ಮಾಡದಿದ್ದರೂ ಮನೆಗೆ ಅನಿಲ ಸರಬರಾಜು ಮಾಡುತ್ತಾರೆ ಎಂದು ಗ್ರಾಹಕ ಪ್ರಕಾಶ ಪವಾರ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಂಡರ್‌ಗಾಗಿ ದಿನಾಲು ಅಂಗಡಿ ಮುಂದೆ ನಿಂತರೂ ಗ್ರಾಹಕರಿಗೆ ಸಿಲಿಂಡರ್ ದೊರಕುತ್ತಿಲ್ಲ. ಆದರೆ ಹೆಚ್ಚು ಹಣ ನೀಡಿದವರಿಗೆ ಮನೆ ಮನೆಗೆ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. 

ಆದರೂ ಸಂಬಂಧಿಸಿದವರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಕೂಡಲೇ ಇಂಥ ಅಕ್ರಮ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಹಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.