ADVERTISEMENT

`ಶಿಕ್ಷಣಕ್ಕಾಗಿ ನೀಡುವ ದೇಣಿಗೆ ಶ್ರೇಷ್ಠವಾದದ್ದು'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:42 IST
Last Updated 15 ಡಿಸೆಂಬರ್ 2012, 8:42 IST

ಸುರಪುರ: ದೇಣಿಗೆಗಳಲ್ಲಿ ಹಲವಾರು ಬಗೆಗಳಿವೆ. ಆದರೆ ಶಿಕ್ಷಣಕ್ಕಾಗಿ ನೀಡುವ ದೇಣಿಗೆ ಸರ್ವ ಶ್ರೇಷ್ಠವಾಗಿ ನಿಲ್ಲುತ್ತದೆ. ನಮ್ಮ ಮಾತೋಶ್ರೀ ಲೀಲಾಬಾಯಿ ಅವರು ಶಿಕ್ಷಣ ಪ್ರೇಮಿಯಾಗಿದ್ದರು.

ಸಾಕ್ಷರತೆ ಮಾತ್ರ ಅಭಿವೃದ್ಧಿಗೆ ಪೂರಕ ಎಂದು ಪ್ರತಿಪಾದಿಸುತ್ತಿದ್ದರು. ನಮಗೆ ಮತ್ತು ಬಡಾವಣೆಯ ಎಲ್ಲರಿಗೂ ಕಡ್ಡಾಯ ಶಿಕ್ಷಣ ಪಡೆಯಿರಿ ಎಂದು ಸಲಹೆ ನೀಡುತ್ತಿದ್ದರು ಎಂದು ಗಣ್ಯ ಉದ್ಯಮಿ ಕಿಶೋರಚಂದ್ ಜೈನ್ ಜ್ಞಾಪಿಸಿಕೊಂಡರು.

ಇಲ್ಲಿನ ಅಕ್ಷರಧಾಮಾ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿಕ್ಷಣ ಪ್ರೇಮಿ ಲೀಲಾಬಾಯಿ ಚಂಪಾಲಾಲ ಛಾಜೇಡ ಅವರ 12ನೆ ಪುಣ್ಮಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವುದು ಮಿಗಿಲು. ಮಕ್ಕಳು ವಿದ್ಯಾವಂತರಾದರೆ ಶ್ರೀಮಂತಿಕೆ ತನ್ನಿಂದ ತಾನೇ ಬರುತ್ತದೆ. ಓದು ಬಲ್ಲವ ಎಲ್ಲ ರಂಗದಲ್ಲಿ ಮುಂದೆ ಬರುತ್ತಾನೆ. ಅನಕ್ಷರಸ್ಥ ಹಿಂದೆ ಬೀಳುತ್ತಾನೆ. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಿದ್ಯೆಯಿಂದ ವಂಚಿತರಾಗಿಸಬಾರದು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜೀತೇಂದ್ರನಾಯಕ್ ದರಬಾರಿ ಮಾತನಾಡಿ, ಲೀಲಾಬಾಯಿ ಅವರು ಶ್ರೇಷ್ಠ ಮಾರ್ಗದರ್ಶಕರಾಗಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲೆ ನಾವು ನಡೆಯುತ್ತಿದ್ದೇವೆ. ಅವರು ನಮ್ಮಿಂದ ಕಣ್ಮರೆಯಾಗಿರಬಹುದು. ಆದರೆ ಅವರು ಬಿಟ್ಟು ಹೋದ ಉತ್ತಮ ಕೆಲಸ ಕಾರ್ಯಗಳಿಂದ ಸ್ಮರಣೀಯರಾಗಿದ್ದಾರೆ. ಅವರು ಇಲ್ಲಿ ಎಲ್ಲೋ ಇದ್ದು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂದರು.

ಉದ್ಯಮಿ ಅರುಣಕುಮಾರ ಜೈನ್, ಮುಖ್ಯ ಗುರು ಶಿವರಾಜನಾಯಕ್ ವೇದಿಕೆಯಲ್ಲಿದ್ದರು. ಲೀಲಾಬಾಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅನಿತಾರಾಣಿ ಸ್ವಾಗತಿಸಿದರು. ಆಫ್ರಿನ್‌ಬೇಗಂ ನಿರೂಪಿಸಿದರು. ರೇಷ್ಮಾ ಬೇಗಂ ವಂದಿಸಿದರು. ಶಿಕ್ಷಕರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.