ADVERTISEMENT

ಸಾಮೂಹಿಕ ಪ್ರಯತ್ನದಿಂದ ಬದಲಾವಣೆ ಸಾಧ್ಯ: ಸೇಡಂ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:05 IST
Last Updated 22 ಅಕ್ಟೋಬರ್ 2012, 6:05 IST

ಯಾದಗಿರಿ: ಯಾವುದೇ ಭಾಗದಲ್ಲಿಯಾಗಲಿ ಪ್ರಗತಿ ಆಗಬೇಕಾದರೆ ಎಲ್ಲರೂ ಸಾಮೂಹಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ, ವಿಕಾಸ ಅಕಾಡೆಮಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಭಾನುವಾರ ನಗರದಲ್ಲಿ ವಿಕಾಸ ಅಕಾಡೆಮಿ ನೂತನ ಜಿಲ್ಲಾ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಧ್ಯಪ್ರದೇಶದ ಯುವಕರು ಪರಿಶ್ರಮದಿಂದ 40 ಕೆರೆಗಳನ್ನು ನಿರ್ಮಾಣ ಮಾಡಿ, ನಿಸರ್ಗದ ನೀರು ವ್ಯರ್ಥವಾಗಿ ಸೋರಿಕೆಯಾಗದಂತೆ ತಡೆದರು. ಇದರಿಂದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ನಮ್ಮ ಭಾಗದ ಯುವಕರು ಸೋಮಾರಿತನ ಹಾಗೂ ದುಶ್ಚಟಗಳನ್ನು ಬಿಟ್ಟು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದು ಹೇಳಿದರು.

ವಿಕಾಸ ಅಕಾಡೆಮಿ ಸಂಚಾಲಕರು ಜಿಲ್ಲೆಯಲ್ಲಿ ಪರಿಸರ ಪ್ರೇಮಿಗಳ ಸಹಕಾರದಿಂದ ಸಸಿ ನೆಡುವ ಕೆಲಸ ಮಾಡಬೇಕು. ಅವರಿಗೆ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಅಗತ್ಯ ಮಾರ್ಗದರ್ಶನ ಪಡೆದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಜನರ ಬದುಕಿನ ಶೈಲಿ ಹಾಗೂ ಚಿಂತನಾ ಶೈಲಿ ಬದಲಾಗಬೇಕು. ಅಂದಾಗ ಮಾತ್ರ ಅದು ಮಹತ್ತರ ಕೆಲಸಗಳಿಗೆ ಸ್ಪೂರ್ತಿ ನೀಡುತ್ತದೆ ಎಂದರು.

ಹೈದರಾಬಾದ್ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆಗಳ ಪಟ್ಟಿ ಮಾಡಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದೇನೆ. ಬೃಹತ್ ಕಾಮಗಾರಿಗಳ ಆರಂಭಕ್ಕೆ ಜನರಿಂದ ಚಳವಳಿ ನಡೆಯಬೇಕು. ಅಂದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಶಾಸಕ ಡಾ.ಎ.ಬಿ. ಮಾಲಕರಡ್ಡಿ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ವೇದಿಕೆಯಲ್ಲಿದ್ದರು.

ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಪಾಟೀಲರ ಗಮನಕ್ಕೆ ತಂದರು.

ಎಪಿಎಮ್‌ಸಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ವಕೀಲರಾದ ಎಸ್.ಬಿ. ಪಾಟೀಲ, ಬಿ. ಜಯಾಚಾರ್ಯ, ವಿ.ಸಿ. ರಡ್ಡಿ, ಸಿದ್ಧಣಗೌಡ ಕಾಡಂನೋರ, ಚಂದ್ರಶೇಖರ ಸಜ್ಜನ, ಸದಾಶಿವಪ್ಪ ಕೋಟಗೇರಾ, ರಾಮಕೃಷ್ಣ ಗುರುಮಠಕಲ್, ಹಣಮರಡ್ಡಿ ಕಂದಕೂರ, ಅಮೃತರಾವ ಮೂಲಗೆ, ಸೋಮಣಗೌಡ ಬೆಳಗೇರಿ, ಪ್ರಶಾಂತರಡ್ಡಿ ಯಲ್ಹೇರಿ, ರಾಜಶೇಖರ ಸಗರ, ವೆಂಕಟರಡ್ಡಿ ಅಬ್ಬೆತುಮಕೂರ, ಭೀಮರಡ್ಡಿ ಹತ್ತಿಕುಣಿ, ಗೋಪಾಲರಡ್ಡಿ ಅನಪೂರ, ವೀರಣ್ಣ ಕುಂಟಿಮಾರಿ, ರಾಜೇಂದ್ರ ಸಜ್ಜನ ಮತ್ತಿತರರು ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.