ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಮ್ಮ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:35 IST
Last Updated 16 ಸೆಪ್ಟೆಂಬರ್ 2011, 6:35 IST

ಸುರಪುರ: ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲು ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಮ್ಮ ಆದ್ಯ ಕರ್ತವ್ಯ. ಅವರ ನಡೆ, ನುಡಿ, ದೇಶಾಭಿಮಾನ, ಜೀವನ ಶೈಲಿಯನ್ನು ಇಂದಿನ ಯುವಕರು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಸರ್ಕಾರವೆ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಪ್ರತಿ ಪಕ್ಷದ ನಾಯಕ ಎಚ್. ಸಿ. ಪಾಟೀಲ ನುಡಿದರು.

ರಂಗಂಪೇಟೆಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸಗರನಾಡು ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ `ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ~ ಮಾಲಿಕೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಜೇವರ್ಗಿ ಕಸಾಪ ಪ್ರಧಾನ ಕಾರ್ಯದರ್ಶಿ ಸದಾನಂದ ಪಾಟೀಲ ಮಾತನಾಡಿ, ಭಗತ್‌ಸಿಂಗ್ ಬಾಲ್ಯದಿಂದಲೆ ಬ್ರಿಟೀಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಕನಸು ಕಂಡಿದ್ದರು. ಅಪ್ಪಟ ದೇಶಪ್ರೇಮಿ ಆದ ಅವರು ಆಂಗ್ಲರ ಕೆಂಗಣ್ಣಿಗೆ ಗುರಿಯಾಗಿ ತಮ್ಮ 23ನೇ ವಯಸ್ಸಿನಲ್ಲಿ ನಗುನಗುತ್ತಲೆ ಭಾರತ ಮಾತಾಕಿ ಜೈ ಎನ್ನುತ್ತಾ ಗಲ್ಲುಗಂಬಕ್ಕೆ ಗುರಿಯಾದದ್ದು ಮರೆಯಲಾಗದ ಕ್ಷಣ ಎಂದು ವಿವರಿಸಿದರು.
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುರೇಶ ಸಜ್ಜನ್, ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಲಿಂಗಪ್ಪ ಖಾನಾಪುರ, ರೈತ ಮುಖಂಡ ಸೋಮಶೇಖರ ಶಾಬಾದಿ ವೇದಿಕೆಯಲ್ಲಿದ್ದರು. ಉಪಪ್ರಾಚಾರ್ಯ ಮಲ್ಲಪ್ಪ ಬಿಲ್ಲವ್ ಅಧ್ಯಕ್ಷತೆ ವಹಿಸಿದ್ದರು.
ವೀರೇಶ ವಾರದ, ಸಂಜಯ ಕಾಳೆ, ಅಮರೇಶ ಕುಂಬಾರ್, ಮಲ್ಲಯ್ಯ ಯಾಳಗಿ, ನಿಂಗಣ್ಣ ಕನ್ನೆಳ್ಳಿ, ನಿಂಗಣ್ಣ ಬುಡ್ಡಾ ಭಾಗವಹಿಸಿದ್ದರು.
ನಾನಗೌಡ ಮಾಳನೂರ ಸ್ವಾಗತಿಸಿದರು. ಪಂಡಿತ ನಿಂಬೂರ್ ನಿರೂಪಿಸಿದರು. ಬಸವರಾಜ ಕೊಡೇಕಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.