ADVERTISEMENT

ಭೀಮಾ ನದಿಗೆ 1.8 ಲಕ್ಷ ಕ್ಯುಸೆಕ್‌ ನೀರು–ಪ್ರವಾಹದ ಆತಂಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 9:08 IST
Last Updated 29 ಸೆಪ್ಟೆಂಬರ್ 2021, 9:08 IST
ಯಾದಗಿರಿ ನಗರ ಹೊರವಲಯದ ಭೀಮಾ ನದಿಗೆ ಹೊರ ಹರಿವು ಹೆಚ್ಚಳವಾಗಿದ್ದು, ತುಂಬಿ ಹರಿಯುತ್ತಿದೆ
ಯಾದಗಿರಿ ನಗರ ಹೊರವಲಯದ ಭೀಮಾ ನದಿಗೆ ಹೊರ ಹರಿವು ಹೆಚ್ಚಳವಾಗಿದ್ದು, ತುಂಬಿ ಹರಿಯುತ್ತಿದೆ   

ಯಾದಗಿರಿ: ಮಳೆಯಿಂದಾಗಿ ಭೀಮಾನದಿಗೆ ನೀರು ಹರಿದು ಬರುತ್ತಿರುವುದರಿಂದ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್‌ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ 1.8 ಲಕ್ಷ ಕ್ಯುಸೆಕ್‌ ನೀರು ಹರಿಸುತ್ತಿದ್ದು, ಪ್ರವಾಹ ಆತಂಕ ಎದುರಾಗಿದೆ.

25 ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದ್ದು, ಇದರ ಪ್ರಮಾಣ 2 ಲಕ್ಷ ಕ್ಯುಸೆಕ್ ಗೆ ಹೆಚ್ಚಾಗುವ ಸಂಭವ ಇದೆ. ಇದರಿಂದ ಜಿಲ್ಲೆಯಲ್ಲಿ ಭೀಮಾ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.

ನಗರ ಹೊರವಲಯದ ಭೀಮಾ ನದಿಗೆ ಹೊರ ಹರಿವು ಹೆಚ್ಚಳವಾಗಿದ್ದು, ತುಂಬಿ ಹರಿಯುತ್ತಿದೆ. ಭೀಮಾ ನದಿ ಸೇತುವೆ ಬಳಿ ಇರುವ ಕಂಗಳೇಶ್ವರ ಹಾಗೂ ವಿರಾಂಜನೇಯ ದೇಗುಲಗಳು ಜಲಾವೃತವಾಗಿದೆ.

ಯಾದಗಿರಿ ತಾಲ್ಲೂಕಿನ ಮಲ್ಹಾರ, ಅಬ್ಬೆತುಮಕೂರು, ತಳಕ್, ಮುಷ್ಟೂರ, ಕೌಳೂರು, ಲಿಂಗೇರಿ, ಶಹಾಪುರ ತಾಲ್ಲೂಕಿನ ಹೊಸೂರು, ಹುರುಸುಗುಂಡಗಿ, ಅಣಬಿ, ಹುಬ್ಬಳ್ಳಿ, ತಂಗಡಗಿ, ನಾಲ್ವಡಗಿ, ವಡಗೇರಾ ತಾಲ್ಲೂಕು ವ್ಯಾಪ್ತಿಯ ಶಿವನೂರು, ಅರ್ಜುಣಗಿ ಮತ್ತು ಜೋಳದಡಗಿ ಗ್ರಾಮಗಳು ನದಿ ತೀರದಲ್ಲಿದ್ದು, ಸದ್ಯ ಯಾವುದೇ ಸಮಸ್ಯೆ ಇಲ್ಲ.

ADVERTISEMENT

‘ಎಲ್ಲಾ ಗ್ರಾಮಗಳಲ್ಲಿ ಪೊಲೀಸ್‌ ಬೀಟ್ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಡಂಗೂರ ಸಾರಲಾಗಿದೆ. ಈ ಗ್ರಾಮಗಳ ರೈತರು ನದಿ ಪಾತ್ರದಲ್ಲಿ ಪಂಪ್‌ಸೆಟ್ ಕೆಲಸ, ಹೊಲದಲ್ಲಿ ವ್ಯವಸಾಯದ ಕೆಲಸಕ್ಕೆ ಮತ್ತು ಜಾನುವಾರುಗಳನ್ನು ಮೇಯಿಸಲು ನದಿ ಪಾತ್ರದ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು’ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.