ಯಾದಗಿರಿ/ ನಾರಾಯಣಪುರ:ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 2.16 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
ಬಸವಸಾಗರ ಜಲಾಶಯದ 25 ಕ್ರಸ್ಟ್ಗೇಟ್ಗಳನ್ನು ತೆರೆದು ಭಾರಿ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ, ನದಿ ತೀರದ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ಛಾಯಾ ಭಗವತಿ ದೇಗುಲದ ಮಂಟಪಕ್ಕೆ ಪ್ರವಾಹದ ನೀರು ಬಂದಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ಬುಧವಾರ ರಾತ್ರಿ 9.30ಕ್ಕೆ 1.70 ಲಕ್ಷ ಕ್ಯುಸೆಕ್ ಒಳಹರಿವು ಇದ್ದರೆ, 1.90 ಲಕ್ಷ ಕ್ಯುಸೆಕ್ ಹೊರ ಹರವು ಇತ್ತು. ಗುರುವಾರ ಬೆಳಿಗ್ಗೆ ಒಳಹರಿವು ಹೆಚ್ಚಳಗೊಂಡಿದ್ದರಿಂದ ಹೊರ ಹರಿವು ಹೆಚ್ಚಳ ಮಾಡಲಾಗಿದೆ.
ಮೈದುಂಬಿ ಹರಿಯುವ ಕೃಷ್ಣಾ ನದಿಯ ಅಬ್ಬರವನ್ನು ವೀಕ್ಷಿಸಲು ತಂಡೋಪ ತಂಡವಾಗಿ ಪ್ರವಾಸಿಗರು ಛಾಯಾ ಭಗವತಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ನದಿ ಪಾತ್ರದಲ್ಲಿ ಆತಂಕ: ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದ್ದು, ನದಿ ದಡದಲ್ಲಿರುವ ನೀರಿನ ಪೈಪ್, ಮೋಟಾರ ಅನ್ನು ರೈತರು ಹೊರ ತೆಗೆಯುತ್ತಿದ್ದಾರೆ.
2.50 ಲಕ್ಷ ಕ್ಯುಸೆಕ್ ಬಂದರೆ ಸೇತುವೆ ಮುಳುಗಡೆ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಹರಿಸಿದರೆ, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರಗಿ ಮಾರ್ಗ ಬಂದ್ ಆಗಲಿದೆ. ತಿಂಥಣಿ ಸೇತುವೆ ಮೂಲಕ ಸುತ್ತುವರೆದು ಬರಬೇಕಾಗುತ್ತದೆ. ನದಿ ಪಾತ್ರದಲ್ಲಿ ಭತ್ತ, ಹತ್ತಿ ಬೆಳೆಯಲಾಗಿದ್ದು, ಮುಳಗಡೆ ಆತಂಕ ಕಾಡುತ್ತಿದೆ.
‘ಪ್ರತಿ ವರ್ಷ ಕೃಷ್ಣಾ ನದಿಗೆ ಪ್ರವಾಹ ಬಂದಾಗ ಕೊಳ್ಳೂರು (ಎಂ) ಗ್ರಾಮದ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಲಿವೆ. ಗ್ರಾಮಸ್ಥರು ಹಲವಾರು ಬಾರಿ ಸೇತುವೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಒತ್ತಾಯಿಸಿದರೂ ಯಾವುದೇ ಉಪಯೋಗವಿಲ್ಲದಂತಾಗಿದೆ'’ ಎಂದು ಕೊಳ್ಳೂರು ನಿವಾಸಿ ಶಿವಾರೆಡ್ಡಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.