ಶಹಾಪುರ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿನ ವಾಲ್ಯೂಮೆಟ್ರಿಕ್ ಗೇಟ್ ಅಳವಡಿಕೆಯಲ್ಲಿ ಕಳಪೆ ಸಾಮಗ್ರಿಗಳನ್ನು ಬಳಕೆ ಮಾಡಿದ್ದು, ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ. ಈ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಎಂದು ಸೌರಾಷ್ಟ್ರ ಸೋಮನಾಥ ವಿತರಣಾ ಕಾಲುವೆ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಮುಖಂಡರು ಮಂಗಳವಾರ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಭೀಮರಾಯನಗುಡಿ ಹಾಗೂ ರಾಂಪುರ ವಿಭಾಗದ ವ್ಯಾಪ್ತಿಯಲ್ಲಿ 4,032 ಗೇಟ್ಗಳನ್ನು ಆಸ್ಟ್ರೇಲಿಯಾ ಮೂಲದ ಕಂಪನಿಯು ₹1,035 ಕೋಟಿಗೆ ಟೆಂಡರ್ ಪಡೆದು ಗೇಟ್ ಅಳವಡಿಕೆಯಲ್ಲಿ ಮಗ್ನವಾಗಿದೆ. ಆದರೆ ಗುಣಮಟ್ಟದ ಕೆಲಸ ನಿರ್ವಹಿಸುತ್ತಿಲ್ಲ. ಟೆಂಡರ್ ನಿಯಮದಂತೆ ಕೆಲಸ ನಿರ್ವಹಿಸದೆ ಉಪ ಗುತ್ತಿಗೆ ನೀಡಿ ಅಕ್ರಮ ಹಾಗೂ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ರಂಗಪ್ಪ ಭೋಜಪ್ಪ ಡಂಗಿ ಆರೋಪಿಸಿದರು.
ಗೇಟ್ ಅಳವಡಿಕೆಯ ಬಗ್ಗೆ ಆಯಾ ಭಾಗದ ರೈತ ಸಂಘ ಹಾಗೂ ನೀರು ಬಳಕೆದಾರರ ಸದಸ್ಯರಿಗೆ ಮಾಹಿತಿ ಕೂಡಾ ನೀಡುತ್ತಿಲ್ಲ. ಅಲ್ಲದೆ ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸದೆ ಕಂಪನಿಯು ಕಾನೂನು ಉಲ್ಲಂಘಿಸಿದೆ. ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ರೈತ ಮುಖಂಡರಾದ ರಾಘವೇಂದ್ರ ಕಾಮನಟಗಿ, ಎಂ.ಆರ್.ಖಾಜಿ, ಯಲ್ಲಯ್ಯ ನಾಯಕ ವನದರ್ಗ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.