ADVERTISEMENT

ರೈತನ ಕೈ ಹಿಡಿದ ಗೋಡಂಬಿ ಬೇಸಾಯ

ಅನಂತಪ್ಪ ಅವರಿಗೆ ಬಾಗಲಕೋಟೆ ವಿಶ್ವವಿದ್ಯಾಲಯದ ‘ಶ್ರೇಷ್ಠ ತೋಟಗಾರಿಕಾ ರೈತ’ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:19 IST
Last Updated 23 ಜನವರಿ 2021, 1:19 IST
ತಮ್ಮ ಜಮೀನಿನಲ್ಲಿ ಬೆಳೆದ ಗೇರು ಬೆಳೆಯೊಂದಿಗೆ ಅನಂತಪ್ಪ ರಾಥೋಡ್
ತಮ್ಮ ಜಮೀನಿನಲ್ಲಿ ಬೆಳೆದ ಗೇರು ಬೆಳೆಯೊಂದಿಗೆ ಅನಂತಪ್ಪ ರಾಥೋಡ್   

ಸೈದಾಪುರ: ಸಮೀಪದ ಗೌಡಗೇರಾ ಗ್ರಾಮದ ಅನಂತಪ್ಪ ಮಂಗ್ಯಾನಾಯಕ ರಾಥೋಡ್ ತಮ್ಮ ಮಳೆಯಾಶ್ರಿತ ಜಮೀನಿನಲ್ಲಿ ಗೋಡಂಬಿ ಬೇಸಾಯ ಮಾಡಿ ಕೈ ತುಂಬ ಸಂಪಾದನೆ ಮಾಡುವ ಜತೆಗೆ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

39 ವರ್ಷದ ಅನಂತಪ್ಪ ಐಟಿಐ ಮುಗಿಸಿದ್ದಾರೆ. ತಮ್ಮ 20 ಎಕರೆ ಜಮೀನಿನಲ್ಲಿ ಸುಮಾರು 13 ಎಕರೆಯಲ್ಲಿ ಗೇರು ಕೃಷಿ ಮಾಡಿದ್ದು, ಅಲ್ಲಿ ಉಲ್ಲಾಳ–1 ಮತ್ತು 3, ವೆಂಗುರ್ಲಾ– 4 ಮತ್ತು 7 ತಳಿಯ ಸುಮಾರು 1,500 ಸಸಿಗಳನ್ನು ಬೆಳೆದಿದ್ದಾರೆ. ಅದರ ಜತೆಗೆ 3 ಎಕರೆ ಜಮೀನಿನಲ್ಲಿ 1,200 ಪೇರಲ ಮರಗಳನ್ನು ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಅಂತರ ಬೆಳೆಗಳಾಗಿ ರಕ್ತ ಚಂದನ, ಟೊಮೆಟೊ, ಹೆಸರು, ಶೇಂಗಾ ಸೇರಿಂದತೆ ತರಹೇವಾರಿ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ತೋಟಗಾರಿಕೆ ಇಲಾಖೆ ಸಹಾಯದಿಂದ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಮಳೆ ನೀರು ಕೊಯ್ಲು ಪದ್ದತಿಯಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಂಡು ತಮ್ಮ ಜಮೀನಿನಲ್ಲಿ 3 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ.

ADVERTISEMENT

ಕಳೆದ ವರ್ಷ ಸುಮಾರು 9 ಕ್ವಿಂಟಲ್ ಗೋಡಂಬಿ ಬಳೆದಿದ್ದು, ಅದರಿಂದಲೇ ₹85 ಸಾವಿರ ಆದಾಯ ಗಳಿಸಿದ್ದಾರೆ.

ಟ್ರ್ಯಾಕ್ಟರ್, ಬೀಜ ಮತ್ತು ಗೊಬ್ಬೆ ಬಿತ್ತುವ ಯಂತ್ರ, ಕಳೆ ತೆಗೆಯುವ ಯಂತ್ರ ಹೊಂದಿದ್ದು, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಅವರ ಬಳಿ 1 ಹಸು, 2 ಎತ್ತು, 10 ಕುರಿ ಮತ್ತು 20 ಕೋಳಿಗಳಿವೆ. ಗೋಡಂಬಿ, ಪೇರಲ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ತರಕಾರಿ ಮಾರಾಟದಿಂದ ಪ್ರತಿ ವರ್ಷ ₹4 ಲಕ್ಷ ಆದಾಯ ಗಳಿಸುವ ಮೂಲಕ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ಅವರ ತೋಟಗಾರಿಕೆ ಕೃಷಿಯಲ್ಲಿನ ಸಾಧನೆ ಗಮನಿಸಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವು 2020– 21ರಲ್ಲಿ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಹಿತಿಗೆ ಮೊ: 8150852123 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.