ಯಾದಗಿರಿ: ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ಕಾರ್ಯಕರ್ತರು ಸಜ್ಜಾಗಿ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಕರೆ ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ಯಾದಗಿರಿ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ವರಿಷ್ಠರು ಸೂಚಿಸಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಕಾರ್ಯಕರ್ತರು ಸಿದ್ದರಾಗಬೇಕಿದೆ. ಗ್ರಾಮ, ತಾಲ್ಲೂಕು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಹತ್ತಿರ ಬರುತ್ತಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ತಿಳಿಸಿದರು.
ಆಗಸ್ಟ್ 15ರ ನಂತರ ಜಿಲ್ಲಾ ಕೇಂದ್ರದಲ್ಲಿ ಕಚೇರಿಯನ್ನು ಆರಂಭಿಸಲಾಗುವುದು. ಪಕ್ಷದ ಪದಾಧಿಕಾರಿಗಳ ಪುನಾರಚನೆಯೂ ಆಗಲಿದೆ. ಪದಾಧಿಕಾರಿಗಳ ನೇಮಕದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಎಲ್ಲ ಕ್ರಿಯಾಶೀಲ ಯುವಕರಿಗೆ ಅವಕಾಶ ಲಭಿಸಲಿದೆ ಎಂದು ತಿಳಿಸಿದರು.
ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸೋತಿದೆ. ಮಳೆಯಿಂದ ಬೆಳೆಗಳು ಹಾಳಾಗಿವೆ. ಇದರಲ್ಲಿಯೂ ಸರ್ಕಾರ ವಿಫಲವಾಗಿದೆ. ಇದನ್ನು ಜನತೆಯ ಮುಂದಿಟ್ಟು ಪಕ್ಷವನ್ನು ಕಟ್ಟಲು ಸೂಕ್ತ ಸಮಯವಾಗಿದ್ದು, ಎಲ್ಲ ಕಾರ್ಯಕರ್ತರು ಪಕ್ಷ ಸಂಘಟನೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚೆನ್ನಪ್ಪಗೌಡ ಮೊಸಂಬಿ, ಮಹಿಳಾ ಘಟಕದ ನಾಗರತ್ನಾ ಮೂರ್ತಿ ಅನಪುರ, ನಗರಾಧ್ಯಕ್ಷ ವಿಶ್ವನಾಥ ಸಿರವಾರ, ಎಂ.ಕೆ. ಬೀರನೂರ, ಶರಣಪ್ಪ ಗುಳಗಿ, ಬಾಲಪ್ಪ ಚಿಕ್ಕಮೇಟಿ ಗುರುಸುಣಿಗಿ, ರಫಿಕ್ ಪಟೇಲ್ ಉಳ್ಳೆಸುಗೂರು, ಬಸವರಾಜ ನೀಲಳ್ಳಿ ವಡಗೇರಿ, ಸಂತೋಷ ನಿರ್ಮಲಕರ್, ವಿನೋದ್ ಶಿರಗೋಳ, ಚಾಂದಪಾಷಾ ಕುರಕುಂದಿ, ಹಣಮಂತ್ರಾಯಗೌಡ ತೇಕರಾಳ, ಹಣಮಂತ ಟೋಕಾಪುರ, ಮಹೇಶ ನಾಯಕ ಬೀರನಕಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.