ADVERTISEMENT

‘ತ್ಯಾಜ್ಯ ಬೇರ್ಪಡಿಸುವಿಕೆ ಅರಿವು ಮೂಡಿಸಿ’; ಸಿಇಒ ಶಿಲ್ಪಾ ಶರ್ಮಾ ಸಲಹೆ

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 2:54 IST
Last Updated 21 ಆಗಸ್ಟ್ 2021, 2:54 IST
ತರಬೇತಿ ಕಾರ್ಯಾಗಾರವನ್ನು ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಉದ್ಘಾಟಿಸಿದರು
ತರಬೇತಿ ಕಾರ್ಯಾಗಾರವನ್ನು ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಉದ್ಘಾಟಿಸಿದರು   

ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿನ ಜನರ ದಿನನಿತ್ಯ ಬಳಕೆಯ ವಸ್ತುಗಳಿಂದ ಉಂಟಾಗುವ ನಿರುಪಯುಕ್ತ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆ ಹೇಗೆ ಮಾಡಬೇಕು ಎನ್ನುವ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮಸ್ಥರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿಸಭಾಂಗಣದಲ್ಲಿ ಸ್ವಚ್ಛ ಭಾರತ್‌ ಮಿಷನ್ ಸಹಯೋಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ನಿತ್ಯ ಗ್ರಾಮೀಣ ಜನರು ಬಟ್ಟೆ, ಪಾತ್ರೆ ತೊಳೆದ ನೀರು, ಸ್ನಾನ ಮಾಡಿದ ನೀರನ್ನು ಹಾಗೂ ಇತರೆ ಚಟುವಟಿಕೆಗಳಿಂದ ಉಂಟಾಗುವ ನಿರುಪಯುಕ್ತ ದ್ರವ ತ್ಯಾಜ್ಯವನ್ನು ಹೇಗೆ ನಿರ್ವಹಿಸಬೇಕು ಎನ್ನುವ ಕುರಿತು ಮಾಹಿತಿ ನೀಡಿ, ಗ್ರಾಮದ ಪ್ರತಿ ಕುಟುಂಬವೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನೋರ ಮಾತನಾಡಿ, ಶೌಚಾಲಯಗಳ ತ್ಯಾಜ್ಯ ವಸ್ತು ಸಂಗ್ರಹಣೆಗೆ ಅವಳಿ ಗುಂಡಿ ನಿರ್ಮಿಸಿ, ಸೇಪ್ಟಿಕ್‌ ಟ್ಯಾಂಕ್ ಇಲ್ಲವೆ ಇಂಗು ಗುಂಡಿ ನಿರ್ಮಿಸಿಕೊಳ್ಳಿ. ಆದರೆ ಶೌಚಾಲಯದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡದೆ, ಅವಳಿ ಗುಂಡಿ ನಿರ್ಮಿಸಿದ್ದಲ್ಲಿ ಮೊದಲನೇ ಗುಂಡಿ ತುಂಬಿದ್ದರೆ (ತ್ಯಾಜ್ಯ ವಿಲೇವಾರಿ ವಾಹನ) ಮಲ ಸಾಗಾಣೆ ವಾಹನದ ಮೂಲಕ ತೆರವು ಮಾಡುವಂತೆ ಜನರಿಗೆ ತಿಳಿಸಿಹೇಳಿ. ಗಾಮ ಪಂಚಾಯಿತಿಗೆ ಒಂದರಂತೆ ಘನ ಮತ್ತು ದ್ರವ ತ್ಯಾಜ್ಯ ವಸ್ತು ನಿರ್ವಹಣೆ ಘಟಕ ನಿರ್ಮಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ರಾಮಚಂದ್ರಪ್ಪ ಬಸೂದೆ, ಜಿಲ್ಲಾ ಶುಚಿತ್ವ ಮತ್ತು ನೈರ್ಮಲ್ಯ ಸಮಾಲೋಚಕ ನಾರಾಯಣ ಸಿರ್ರಾ ಚಂಡ್ರಕಿ, ಎಚ್‍ಆರ್‌ಡಿ ಸಮಾಲೋಚಕ ವೆಂಕಟೇಶ ಪವಾರ, ಎಸ್‍ಎಲ್‍ಡಬ್ಲ್ಯುಎಂ ಸಮಾಲೋಚಕಿ ಪಲ್ಲವಿ, ಎಎಂಐಎಸ್ ಸಮಾಲೋಚಕ ಮಹಾದೇವರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.