ADVERTISEMENT

ಪ್ರಚಾರದಿಂದ ಹಿಂದಿರುಗಿದ ಬಾಬುರಾವ್ ಚೌವಾಣ್

ತಾಂಡಾಗಳಲ್ಲಿ ಪ್ರಚಾರ ನಡೆಸದಂತೆ ಬುದ್ಧಿ ಹೇಳಿದ ಬಂಜಾರ ಮುಖಂಡರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:23 IST
Last Updated 9 ಏಪ್ರಿಲ್ 2019, 16:23 IST

ಯಾದಗಿರಿ: ಗುಲಬರ್ಗಾ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಲು ಮಂಗಳವಾರ ಗುರುಮಠಕಲ್‌ ಪಟ್ಟಣದತ್ತ ಹೊರಟಿದ್ದ ಕಾಂಗ್ರೆಸ್‌ ಮುಖಂಡ ಬಾಬುರಾವ್‌ ಚೌವಾಣ್ ಅವರನ್ನು ಬಂಜಾರ ಸಮುದಾಯದ ಮುಖಂಡರು ಕಾಕಲವಾರ ಕ್ರಾಸ್‌ ಬಳಿ ತಡೆದು ಪ್ರಚಾರದಿಂದ ಹಿಂದೆ ಸರಿಯುವಂತೆ ಬುದ್ಧಿ ಹೇಳಿದ್ದಾರೆ.

‘ಇಡೀ ದೇಶದಲ್ಲಿ ಬಂಜಾರ ಸಮುದಾಯದ ಜಾಧವ ಅವರಿಗೆ ಮಾತ್ರ ಟಿಕೆಟ್‌ ಸಿಕ್ಕಿದೆ. ಇತರೆ ಯಾವ ಪಕ್ಷಗಳೂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಬಂಜಾರ ಸಮುದಾಯದ ವ್ಯಕ್ತಿ ಸಂಸದರಾಗಲು ನೀವೇ ಅಡ್ಡಗಾಲು ಹಾಕುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

‘ನೀವು ಇಷ್ಟು ಕಾಲ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ ಬಂದಿದ್ದು ಯಾಕೆ? ಇಷ್ಟು ದಿನ ಖರ್ಗೆಯನ್ನು ವಿರೋಧಿಸುತ್ತಿದ್ದೀರಿ. ಈಗ ನಮ್ಮದೇ ಸಮಾಜದವರೊಬ್ಬರು ಲೋಕಸಭೆಗೆ ಹೋಗುವ ಅವಕಾಶ ಬಂದಾಗ ಸ್ವಾರ್ಥಕ್ಕಾಗಿ ಮತ ನೀಡಬೇಡಿ ಎನ್ನುತ್ತೀರಿ. ಅಧಿಕಾರಕ್ಕಾಗಿ ಸಮಾಜಕ್ಕೆ ದ್ರೋಹವಾದರೂ ಸಹಿಸಿಕೊಳ್ಳುತ್ತೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಚೌವಾಣ್,‘ಡಾ.ಉಮೇಶ್ ಜಾಧವ ಸಂಸದರಾಗಲು ಹೇಗೆ ಬಿಜೆಪಿಗೆ ಹೋಗಿದ್ದಾರೋ, ಹಾಗೆಯೇ ನಾನೂ ಶಾಸಕನಾಗುವ ಆಸೆಯಿಂದ ಕಾಂಗ್ರೆಸ್ ಹೋಗಿದ್ದೇನೆ' ಎಂದಿದ್ದಾರೆ.

‘ನೀವು ಶಾಸಕರಾದರೆ ನಮಗೂ ಸಂತೋಷ. ಆದರೆ, ನೀವು ಶಾಸಕರಾಗಬೇಕು ಎನ್ನುವ ಕಾರಣಕ್ಕೆ ಜಾಧವ ಸಂಸದರಾಗುವುದನ್ನು ತಪ್ಪಿಸಬೇಕೆ? ಬಂಜಾರ ಸಮಾಜದಲ್ಲಿನ ವ್ಯಕ್ತಿ ಸಂಸದರಾಗಲು ಅವಕಾಶ ಮಾಡಿಕೊಡಿ. ಕೂಡಲೇ ನೀವು ಗುರುಮಠಕಲ್‌ ತಾಂಡಾಗಳಲ್ಲಿ ಪ್ರಚಾರ ಮಾಡುವುದನ್ನು ನಿಲ್ಲಿಸಿ’ ಎಂದು ತಾಕೀತು ಮಾಡಿದ್ದಾರೆ.

ಹೀಗಾಗಿ ಬಾಬುರಾವ್ ಚೌವಾಣ್ ಸ್ಥಳದಿಂದ ಹಿಂದಿರುಗಿದ್ದಾರೆ.

ನಂತರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಮುಖಂಡ ರೇವೂ ನಾಯಕ ಬೆಳಮಗಿ, ಕಾಂಗ್ರೆಸ್‌ ಮುಖಂಡ ಸುಭಾಷ್‌ ರಾಥೋಡ ಅವರಿಗೂ ಬಂಜಾರ ಸಮಾಜದ ಯುವಕರು ತಾಂಡಾಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸದಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.