ADVERTISEMENT

ಬಂಜಾರ ಸಮುದಾಯ ವಿಭಿನ್ನ ಸಂಸ್ಕೃತಿ ಹೊಂದಿದೆ: ಉಪನ್ಯಾಸಕ ಪಾಂಡು ಎಲ್ ರಾಠೋಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 16:06 IST
Last Updated 9 ಜನವರಿ 2020, 16:06 IST
ಗುರುಮಠಕಲ್ ತಾಲ್ಲೂಕಿನ ಅರಿಕೇರಾ (ಕೆ) ತಾಂಡಾದಲ್ಲಿ ಬಂಜಾರ ಸರ್ಕಾರಿ ನೌಕರರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು
ಗುರುಮಠಕಲ್ ತಾಲ್ಲೂಕಿನ ಅರಿಕೇರಾ (ಕೆ) ತಾಂಡಾದಲ್ಲಿ ಬಂಜಾರ ಸರ್ಕಾರಿ ನೌಕರರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು   

ಯಾದಗಿರಿ: ಭಾರತೀಯ ಸಂಸ್ಕೃತಿಗೆ ಬಂಜಾರ ಸಮುದಾಯ ತನ್ನದೇ ಕೊಡುಗೆ ನೀಡಿದೆ. ಹೋಳಿ, ದೀಪಾವಳಿ, ದಸರಾ ವಿಭಿನ್ನ ರೀತಿ ಆಚರಿಸಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ಉಪನ್ಯಾಸಕ ಪಾಂಡು ಎಲ್ ರಾಠೋಡ ಹೇಳಿದರು.

ಗುರುಮಠಕಲ್ ತಾಲ್ಲೂಕಿನ ಅರಿಕೇರಾ (ಕೆ) ತಾಂಡಾದಲ್ಲಿ ಈಚೆಗೆ ಬಂಜಾರ ಸರ್ಕಾರಿ ನೌಕರರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಿಕ್ಷಣ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದವರು ಧೂಮಪಾನ, ಕುಡಿತ, ಇಸ್ಪೀಟ್‌ಗೆ ಮಾರು ಹೋಗಿ ಕೌಟುಂಬಿಕ ಜೀವನ ಹಾಳು ಮಾಡಿಕೊಳ್ಳುತ್ತಿದೆ. ಇದರಿಂದ ಹೊರ ಬರಬೇಕಾದರೆ ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಸಮಾಜ ಸದೃಢವಾಗಿ ಬೆಳೆಯುತ್ತದೆ ಎಂದರು.

ADVERTISEMENT

ನಿವೃತ್ತ ಮುಖ್ಯಶಿಕ್ಷಕ ತೇಜಪ್ಪಾ ಕಟ್ಟಿಮನಿ ಮಾತನಾಡಿ, ತಾಂಡಾದ ಪ್ರತಿಯೊಬ್ಬರು ಜಾಗೃತರಾಗಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕೆಂದರು.

ಸೇವಾ ಫೌಂಡೆಷನ್ ಅಧ್ಯಕ್ಷ ಸುರೇಶ ರಾಠೋಡ ಮಾತನಾಡಿ, ರಾಜಕೀಯ ಪಕ್ಷಗಳ ಅಡಿಯಾಳಾಗಬೇಡಿ. ಸಂಘಟಿತರಾಗಿ ತಾಂಡಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಸೇವೆಗೆ ಸೇರಿದ ರಾಮ ಮತ್ತು ಬಸವರಾಜರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅಂಬ್ರೇಶ ಚಾವ್ಹಾಣ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲ್ ಪವಾರ, ಶೇಖರ್ ಚವ್ಹಾಣ, ಚಂದ್ರಕಾಂತ ಚವ್ಹಾಣ, ರವಿ ಕೆ. ಮುದ್ನಾಳ, ವಿಜಯ ಜಾಧವ, ವಿಜಯ ಮಗದಪುರ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಚವ್ಹಾಣ, ನಾಮ್ಯನಾಯಕ, ಕಿರಣ ದೇವರಾಜ, ರಾಜು, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಇದ್ದರು. ಅರವಿಂದ ರಾಠೋಡ ನಿರೂಪಿಸಿದರು. ವಿನೋದ ಚವಾಣ ಸ್ವಾಗತಿಸಿದರು. ಲಕ್ಷಣ ರಾಠೋಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.