ADVERTISEMENT

ಯಾದಗಿರಿ ಜಿಪಂ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಯಡಿಯಾಪುರ ಆಯ್ಕೆ

ಬಿಜೆಪಿ ಕಮಾಲ್‌, ಅಧ್ಯಕ್ಷ ಸ್ಥಾನ ಒಲಿಸಿಕೊಂಡ ಕಮಲ, ಮುಖಭಂಗ ಅನುಭವಿಸಿದ ‘ಕೈ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 16:06 IST
Last Updated 10 ಜುಲೈ 2020, 16:06 IST
ಯಾದಗಿರಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಯಡಿಯಾಪುರ ಆಯ್ಕೆಯಾಗಿದ್ದರಿಂದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು
ಯಾದಗಿರಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಯಡಿಯಾಪುರ ಆಯ್ಕೆಯಾಗಿದ್ದರಿಂದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು   

ಯಾದಗಿರಿ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಸುರಪುರ ತಾಲ್ಲೂಕಿನ ಅರಕೇರಾ (ಜೆ) ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಅಧ್ಯಕ್ಷರಾಗಿ ಆಯ್ಕೆಯಾದರು.ಶಹಾಪುರ ತಾಲ್ಲೂಕಿನ ಸಗರ ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ನಾಗಪ್ಪ ಸೋಲು ಅನುಭವಿಸಿದರು.

ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಸೆಳೆದುಕೊಂಡ ಬಿಜೆಪಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ಗೆ ಮುಖಭಂಗವಾಯಿತು.

ಬಿಜೆಪಿಯ 10 ಮತ್ತು ಕಾಂಗ್ರೆಸ್‌ನ ಇಬ್ಬರ ಮತ ಸೇರಿ 12 ಮತ ಪಡೆದು ಬಸನಗೌಡ ಆಯ್ಕೆಯಾದರು. ಶರಣಮ್ಮ ಕಾಂಗ್ರೆಸ್‌ನ9, ಜೆಡಿಎಸ್‌ನ 1ಮತಸೇರಿ 10 ಮತ ಪಡೆದು ಪರಾಭವಗೊಂಡರು.ಚುನಾವಣೆಯಲ್ಲಿ 22 ಸದಸ್ಯರು ಹಾಜರಿದ್ದು, ಮತ ಚಲಾಯಿಸಿದರು.

ADVERTISEMENT

ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶಹಾಪುರ ತಾಲ್ಲೂಕಿನ ಸಗರ ಜಿ.ಪಂ. ಸದಸ್ಯೆ ಶರಣಮ್ಮ ನಾಗಪ್ಪ,ಬಿಜೆಪಿ ಸದಸ್ಯರ ಬೆಂಬಲದೊಂದಿಗೆಬಸನಗೌಡ ಪಾಟೀಲ ಯಡಿಯಾಪುರ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.ಚುನಾವಣಾಧಿಕಾರಿಯಾಗಿ ಕಲಬುರ್ಗಿಪ್ರಾದೇಶಿಕ ಆಯುಕ್ತ ಎನ್‌.ವಿ.ಪ್ರಸಾದ ಕಾರ್ಯನಿರ್ವಹಿಸಿದರು.

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಿಂಗ್ ಮೇಕರ್ ಆದ ರಾಠೋಡ: ಜಿ.ಪಂ. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಶಹಾಪುರ ತಾಲ್ಲೂಕಿನ ಗೋಗಿ ಜಿಲ್ಲಾ ಪಂಚಾಯಿತಿ ಸದಸ್ಯ ಕಿಶನ್‌ರಾಠೋಡ ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ಮೆರೆದರು. ಈ ಮೊದಲು ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆ ವೇಳೆ ರಾಜಶೇಖರಗೌಡ ಪಾಟೀಲ ವಜ್ಜಲ್‌ಬೆನ್ನಿಗೆ ನಿಲ್ಲುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಲು ಪ್ರಮುಖ ಪಾತ್ರ ವಹಿಸಿದ್ದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಜನಸಂಪರ್ಕ ಕಚೇರಿಯಲ್ಲಿ ಕಾರ್ಯಕರ್ತರು ಸೇರಿ ವಿಜಯೋತ್ಸವ ಆಚರಿಸಿದರು. ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಶಾಸಕರಾದ ಡಾ. ವೀರಬಸವಂತರಡ್ಡಿ ಮುದ್ನಾಳ, ಗುರುಪಾಟೀಲ ಶಿರವಾಳ, ಎಚ್.ಸಿ.ಪಾಟೀಲ, ರಾಜಾ ಹನುಮಪ್ಪ ನಾಯಕ, ಸಿದ್ದಣಗೌಡ ಕಾಡಂನೋರ, ಕಿಶನ ರಾಠೋಡ, ಬಸವರಾಜ ಚಂಡರಕಿ, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್, ರಮೇಶ ದೊಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.