ಬೋನ್ಹಾಳ (ಸುರಪುರ): ‘ದೇಶದ ಎರಡನೇ ಅತಿದೊಡ್ಡ ಪಕ್ಷಿಧಾಮವೆಂದು ಖ್ಯಾತಿ ಪಡೆದಿರುವ ಬೋನ್ಹಾಳ ಪಕ್ಷಿಧಾಮ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಅಪರೂಪದ ಪಕ್ಷಿ ಸಂಕುಲ ರಕ್ಷಿಸಲು ಈ ಪಕ್ಷಿಧಾಮವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ. ವಿಜಯಕುಮಾರ ಆಗ್ರಹಿಸಿದರು.
ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಮತ್ತು ಪರಿಸರಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಗುರುವಾರ ಪಕ್ಷಿಧಾಮ ವೀಕ್ಷಿಸಿ ಅವರು ಮಾತನಾಡಿದರು.
‘ಈ ಪಕ್ಷಿಧಾಮಕ್ಕೆ ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಇತರ ದೇಶಗಳಿಂದ ಅಪರೂಪದ ಪಕ್ಷಿಗಳು ವಲಸೆ ಬರುತ್ತವೆ. ಆದರೆ ಅವುಗಳಿಗೆ ಪೂರಕ ವ್ಯವಸ್ಥೆ ಇಲ್ಲ. ಕೆರೆಯಲ್ಲಿ ಸಾಕಷ್ಟು ಹೊಂಡು, ಹುಲ್ಲು ಇದೆ. ನೀರು ಸ್ವಚ್ಛ ಇಲ್ಲ. ಇದರಿಂದ ಪಕ್ಷಿಗಳಿಗೆ ಅಹಾರ ದೊರಕುತ್ತಿಲ್ಲ. ಮೀನುಗಳು ಅಭಿವೃದ್ಧಿಯಾಗುತ್ತಿಲ್ಲ’ ಎಂದು ವಿಷಾದಿಸಿದರು.
‘ಪಕ್ಷಿಪ್ರಿಯರು, ಪ್ರವಾಸಿಗರಿಗೆ ಅನುಕೂಲಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ತಂಗುವ ವ್ಯವಸ್ಥೆ, ಸರಿಯಾದ ಸಂಪರ್ಕ ರಸ್ತೆ ಇಲ್ಲ. ಉದ್ಯಾನ ಸರಿಯಿಲ್ಲ. ಕ್ಯಾಂಟೀನ್, ಬೋಟಿಂಗ್ ವ್ಯವಸ್ಥೆ ಇಲ್ಲ ಎಂದರು. ‘ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಎಲ್ಲ ಅನುಕೂಲ ಕಲ್ಪಿಸಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಲಾಭವಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಸಿದ್ದಪ್ಪ, ಪರಿಸರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಕರಿಯಣ್ಣನವರ, ಪ್ರಾಧ್ಯಾಪಕ ಡಾ. ಬಿ. ಬಸವರಾಜ, ಭೀ ಗುಡಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್.ಎಸ್. ಕುಲಕರ್ಣಿ, ಸುರಪುರ ಪ್ರಭು ಕಾಲೇಜಿನ ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಡಿ. ವಾರಿಸ್
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.