ಯಾದಗಿರಿ: ನಗರದ ನ್ಯೂಕನ್ನಡ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ವತಿಯಿಂದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಶತಮಾನದ ನೆನಪಿಗಾಗಿ ’ಜಲಿಯನ್ ವಾಲಾಬಾಗ್ ಹತ್ಯಾಕಾಂಡ’ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.
ಎಬಿವಿಪಿಯ ವಿಭಾಗ ಪ್ರಮುಖ ಡಾ.ಉಪೇಂದ್ರ ನಾಯಕ ಮಾತನಾಡಿ, 1919 ಏಪ್ರಿಲ್ 13ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಹೃದಯ ವಿದ್ರಾವಕ ಘಟನೆ. ಅಲ್ಲಿ ನಡೆದಿದ್ದು ಮಾನವೀಯತೆರಯ ಮಾರಣ ಹೋಮ. ಈ ದುರ್ಘಟನೆಯ ಕುರಿತು ವಿಶೇಷ ಬೆಳಕು ಚೆಲ್ಲುವ ಕಿರು ಹೊತ್ತಿಗೆಯಿದು. ಈ ಘಟನೆ ನಡೆದು 100 ವರ್ಷ ಕಳೆದರೂ ಇಂದಿನ ಯುವ ಸಮುದಾಯಕ್ಕೆ ಈ ವಿಷಯ ತಿಳಿಯದೇ ಇರುವುದು ದುಃಖಕರ ಸಂಗತಿ. ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಅದೆಂತಹ ತ್ಯಾಗ ಬಲಿದಾನ ಮಾಡಿದ್ದಾರೆ. ಅವರು ಮಾಡಿದ ಅಂತಹ ಆತ್ಮಸಮರ್ಪಣೆಗೆ ಒಂದಿಷ್ಟು ಚ್ಯುತಿಬಾರದಂತೆ, ಅವರ ಆ ಬಲಿದಾನದ ಘನತೆಗೆ ಅಪಚಾರವಾಗದಂತೆ ಇದೀಗ ನಾವಿರುವ ಪಾತ್ರಗಳಲ್ಲೆ ನಮ್ಮನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿಕೊಳ್ಳಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ರಘುನಾಥರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ ಮತ್ತು ಜಿಲ್ಲಾ ಸಂಚಾಲಕ ನಿತೇಶ್ ಕುಮಾರ ಕುರಕುಂದಿ, ಮಲ್ಲಿಕಾರ್ಜುನ ಬಡಿಗೇರ, ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾದ ಭೀಮು ಪೂಜಾರಿ, ಮಲ್ಲಿಕಾರ್ಜುನ ಹೂಗಾರ, ಪರಶುರಾಮ, ಸೌಮ್ಯ, ಶೃತಿ, ವೆಂಕಟೇಶ, ಅಶೋಕ ಪಗಲಾಪುರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.ನಿತೇಶ ಸ್ವಾಗತಿಸಿ, ಕ್ಯಾತಪ್ಪ ವಂದಿಸಿದರು.ರಾಜೀವ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.