ADVERTISEMENT

ಕೊಳ್ಳೂರ(ಎಂ) ಸೇತುವೆ ಮುಳುಗಡೆಯಾಗುವ ಭೀತಿ: ಬಸ್‌ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:50 IST
Last Updated 21 ಆಗಸ್ಟ್ 2025, 6:50 IST
<div class="paragraphs"><p>ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹೊಂದಿಕೊಂಡು ಪ್ರವಾಹದ ನೀರು ಹರಿದು ಬರುತ್ತಲಿದೆ</p></div>

ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹೊಂದಿಕೊಂಡು ಪ್ರವಾಹದ ನೀರು ಹರಿದು ಬರುತ್ತಲಿದೆ

   

ಶಹಾಪುರ: ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ಹೊಂದಿಕೊಂಡು ಪ್ರವಾಹದ ಹೆಚ್ಚಿನ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿರುವುದರಿಂದ ಬುಧವಾರ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯ ರಸ್ತೆ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂದು ಶಹಾಪುರ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕ ರವಿಶಂಕರ ತಿಳಿಸಿದರು.

ಜಿಲ್ಲಾಧಿಕಾರಿ ಅವರು ಬುಧವಾರ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಬಸ್ ಸಂಚಾರ ಸ್ಥಗಿತಗೊಳಿಸಲು ಸೂಚಿಸಿದರು. ಅಲ್ಲದೆ ದೇವದುರ್ಗ ತಹಶೀಲ್ದಾರ್ ಅವರು ದೇವದುರ್ಗದಿಂದ ಶಹಾಪುರ ಕಡೆ ಬರುವ ಬಸ್ ಸಂಚಾರ ಬಂದ್ ಮಾಡಿಸಿದರು. ಅದರಂತೆ ನಾವು ಸಹ ಬಸ್ ಸಂಚಾರ ಸ್ಥಗಿತಗೊಳಿಸಿದೆ. ರಾಯಚೂರು ಹಾಗೂ ದೇವದುರ್ಗಕ್ಕೆ ತೆರಳಲು ಸುರಪುರ ತಾಲ್ಲೂಕಿನ ತಿಂಥಣಿ ಬ್ರೀಜ್ಡ್‌ ಮೂಲಕ ಅಂದರೆ 40 ಕಿ,ಮೀ ಸುತ್ತುವರೆದು ಹೋಗಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಸೇತುವೆ ಮೇಲೆ ನೀರು ಬಂದಿಲ್ಲ. ಖಾಸಗಿ ವಾಹನಗಳಾದ ಟಂಟಂ, ದ್ವಿಚಕ್ರ ವಾಹನ, ಲಾರಿ, ಜೀಪು ಓಡಾಡುತ್ತಲಿವೆ. ರಾತ್ರಿ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಹಾಪುರ ಠಾಣೆಯ ಪೊಲೀಸ ಸಿಬ್ಬಂದಿಯನ್ನು ಬಂದೋಬಸ್ತಿಗೆ ನಿಯೋಜಿಸಿದ್ದಾರೆ ಎಂದು ಗ್ರಾಮದ ಮುಖಂಡ ಹಣಮಂತ ಭಂಗಿ ತಿಳಿಸಿದರು.

2.60ಲಕ್ಷ ಕ್ಯೂಸೆಕ್ ನೀರು:

ನೆರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ನಾರಾಯಣ ಪುರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ 2.60ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದಾರೆ. ಇದರಿಂದ ಪ್ರವಾಹದ ನೀರು ತಗ್ಗು ಪ್ರದೇಶದ ಜಮೀನುಗಳಲ್ಲಿ ನುಗ್ಗಿದೆ. ನದಿ ಪಾತ್ರದಲ್ಲಿ ಬಿತ್ತನೆ ಮಾಡಿದ ಹತ್ತಿ, ಭತ್ತ, ಮೆಣಸಿನಕಾಯಿ ಬೆಳೆಗೆ ಸಂಕಷ್ಟ ಎದುರಾಗಿದೆ.

ವಿದ್ಯುತ್ ಸಾಮಗ್ರಿಗಳ ಸ್ಥಳಾಂತರ

ಕೃಷ್ಣಾ ನದಿ ಪಾತ್ರದ ಗ್ರಾಮದ ವ್ಯಾಪ್ತಿಯ ರೈತರು ಬೆಳೆಗಳಿಗೆ ನದಿ ನೀರು ಸೆಳೆದುಕೊಳ್ಳಲು ಅಳವಡಿಸಿದ ವಿದ್ಯುತ್ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ತೆರಳಿದರು. ಅದರಲ್ಲಿ ವಿದ್ಯುತ್ ಪರಿವರ್ತಕ ಯಂತ್ರ ಟಿ.ಸಿ, ಮೋಟಾರ್, ವೈರ್ ಹಾಗೂ ವಿದ್ಯುತ್ ಕಂಬ ಪ್ರವಾಹಕ್ಕೆ ಹಾನಿ ಆಗುತ್ತದೆ. ಮತ್ತೆ ಪ್ರವಾಹ ಇಳಿಮುಖವಾದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಣಗಾಡಬೇಕಾಗುತ್ತದೆ. ಪ್ರತಿ ಪ್ರವಾಹ ಬಂದಾಗ ನದಿ ಪಾತ್ರದ ಜನತೆ ಗೋಳು ಅನುಭವಿಸುವದು ಜೀವನ ಒಂದು ಭಾಗವಾಗಿ ಬಿಟ್ಟಿದೆ. ಪ್ರವಾಹದಿಂದ ಸಾಕಷ್ಟು ಬೆಳೆ ನಷ್ಟವನ್ನು ಅನುಭವಿಸಬೇಕು ಎನ್ನುತ್ತಾರೆ ನದಿ ಪಾತ್ರದ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.