
ಯಾದಗಿರಿ: ‘ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸುವದಕ್ಕೂ ಪ್ರಾಧಾನ್ಯತೆ ನೀಡುವದು ಬಹುಮುಖ್ಯವಾಗಿದೆ’ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಹಿಂದೆ ಮದ್ಯ, ಧೂಮ್ರಪಾನ ಇತರೆ ಚಟಗಳಿಗೆ ಬಲಿಯಾಗುವವರನ್ನು ವ್ಯಸನಿ ಎಂದು ಕರೆಯುತ್ತಿದ್ದರು. ಆದರೇ ಇಂದು ಮೊಬೈಲ್ ವ್ಯಸನಿಗಳ ಸಂಖ್ಯೆ ಅಧಿಕವಾಗಿದೆ’ ಎಂದು ಕಳವಳವ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ ಧರ್ಮಸ್ಥಳದ ಸಂಸ್ಥೆಯಿಂದ ಸಾವಿರಾರು ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಉದ್ಯೋಗ ಹೀಗೆ ಎಲ್ಲ ರೀತಿಯಿಂದಲ್ಲೂ ಸಹಾಯ ಮಾಡುತ್ತಿದೆ. ಇಲ್ಲಿ ಸಾಲ ಪಡೆದವರು ಪ್ರಮಾಣಿಕವಾಗಿ . ಸಾಧನೆ ಮಾಡುವ ಮಹಿಳೆಯರಿಗೆ ಸಹಕಾರ ನೀಡಿ’ ಎಂದರು.
ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ನಾಗರತ್ನ ಕುಪ್ಪಿ ಮಾತನಾಡಿ, ಗಿರಿಜಿಲ್ಲೆಯ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಹಾಗೂ ಮಹಿಳೆಯರ ಸಬಲಿಕರಣಕ್ಕೆ ಧರ್ಮಸ್ಥಳ ಸಂಸ್ಥೆ ಸಾಕಷ್ಟು ಕೆಲಸ ಮಾಡುತ್ತಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್ಐ ನಾಗಮ್ಮ ದೇವದುರ್ಗಕರ್ ಮಾತನಾಡಿ, ‘ಶಿಕ್ಷಣ ಪಡೆಯುತ್ತಿರುವ ಬಾಲಕಿಯರಿಗೆ ಬೇಗನೇ ಮದುವೆ ಮಾಡಿ ಅವರ ಬದುಕು ನರಕ ಮಾಡಬೇಡಿ, 18 ವರ್ಷದೊಳಗಿನ ಬಾಲಕಿಯರಿಗೆ ಮದುವೆ ಮಾಡಿಸಿದರೇ, ಸೂಕ್ತ ಕಾನೂನುಕ್ರಮ ಎದುರಿಸಬೇಕಾಗುತ್ತದೆ. ಬದಲಿಗೆ ಮಹಿಳೆಯರಿಗೆ ಉನ್ನತ ಶಿಕ್ಷಣ ಕೊಡಿಸಿ’ ಎಂದು ಸಲಹೆ ನೀಡಿದರು.
ಆರ್ಯ ವೈಶ್ಯ ಸಂಘದ ಅಧ್ಯಕ್ಷ ಕಾಸುಲ ವೆಂಕಟಯ್ಯ ಮಾತನಾಡಿದರು. ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ, ನಗರಸಭೆ ಮಾಜಿ ಉಪಾಧ್ಯಕ್ಷೆ ರುಖಿಯಾ ಬೇಗಂ, ಸಾಬು ಚಂಡಕ್ರಿ ಅತಿಥಿಗಳಾಗಿ ಭಾಗವಹಿಸಿದ್ದರು. ಆರ್ಡಿಪಿಆರ್ ಸಂಪನ್ಮೂಲ ವ್ಯಕ್ತಿ ಶಾರದಾ ಆಡ್ಕಿ ಅವರು, ಕೌಟುಂಬಿಕ ನೈರ್ಮಲ್ಯದಲ್ಲಿ ಶೌಚಾಲಯದ ಮಹತ್ವ ಕುರಿತು ವಿಶೇಷ ಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರ ಯೋಜನಾಧಿಕಾರಿ ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ನಿರೂಪಿಸಿದರು. ತಾಲ್ಲೂಕಿನ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.