ADVERTISEMENT

‘ಸಹಕಾರಿ ಸಚಿವಾಲಯದಿಂದ ಗ್ರಾಮೀಣ ಭಾಗದ ಅಭಿವೃದ್ಧಿ’

ಗುರುನಾಥ ಜಾಂತಿಕರ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 5:03 IST
Last Updated 11 ಜುಲೈ 2021, 5:03 IST
ಗುರುನಾಥ ಜಾಂತಿಕರ
ಗುರುನಾಥ ಜಾಂತಿಕರ   

ಯಾದಗಿರಿ: ‘ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ರಚಿಸಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ’ ಎಂದು ಕರ್ನಾಟಕ ರಾಜ್ಯ ಬಸವೇಶ್ವರ ಸಹಕಾರ ಮಹಾಮಂಡಳ ಅಧ್ಯಕ್ಷ ಗುರುನಾಥ ಜಾಂತಿಕರ ಹೇಳಿದರು.

‘ದೇಶದ ಸಹಕಾರಿ ಚಳವಳಿಗೆ 117 ವರ್ಷಗಳ ಇತಿಹಾಸವಿದ್ದು, ಈಗ ಕೇಂದ್ರ ಸರ್ಕಾರ ಪ್ರತ್ಯೇಕ ಇಲಾಖೆ ಮಾಡಿದ್ದರಿಂದ ಬಲ ಬಂದಂತೆ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಹಕಾರ ಚಳವಳಿಯಲ್ಲಿ ಮೈಲಿಗಲ್ಲಾಗಿರುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ ದೇಶದ ಸಹಕಾರಿಗಳ ಕೂಗನ್ನು ಪರಿಗಣಿಸಿದೆ. ಸಹಕಾರಿ ಕ್ಷೇತ್ರ ಏಳು–ಬೀಳುಗಳ ಮಧ್ಯೆಯೂ ಗಣನೀಯ ಸಾಧನೆ ಮಾಡಿದೆ. ಇಪ್ಕೋ, ಕ್ರಿಪ್ಕೋ, ಕ್ಯಾಂಪ್ಕೋ, ಆಸ್ಪತ್ರೆಗಳು, ಶಾಲಾ–ಕಾಲೇಜುಗಳು, ರಾಷ್ಟ್ರ ಮಟ್ಟದ ಸಂಸ್ಥೆಗಳನ್ನು ಒಳಗೊಂಡಿದೆ. ದೇಶದಲ್ಲಿ 6.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ದೇಶದ ಶೇ 95ರಷ್ಟು ಗ್ರಾಮಗಳಲ್ಲಿ ಅಂದರೆ 6 ಲಕ್ಷಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಹೀಗಾಗಿ ಪ್ರಸ್ತುತ ಸರ್ಕಾರ ಸಹಕಾರ ಕ್ಷೇತ್ರದ ಆಳ–ಅಗಲ ಗಮನಿಸಿ ಪ್ರತ್ಯೇಕ ಸಚಿವಾಲಯ ರಚಿಸುವುದು ಮುಂದಿನ ದಿನಗಳಲ್ಲಿ ಸಹಕಾರ ಚಳವಳಿಯನ್ನು ಇನ್ನಷ್ಟು ಗುಣಾತ್ಮಕ, ಫಲಾತ್ಮಕವಾಗಿ ಬೆಳೆಯಲಿದೆ’ ಎಂದು ಆಶಿಸಿದರು.

‘ಸಹಕಾರ ಕ್ಷೇತ್ರದಲ್ಲಿ ರಾಜ್ಯದ ನಿಯಂತ್ರಣ ತಪ್ಪುವುದಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾತ್ತದೆ. ಅಲ್ಲದೆ ರಾಜ್ಯಗಳು ಒಪ್ಪಿಗೆ ನೀಡಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ವೈ.ಟಿ.ಪಾಟೀಲ, ಶರಣ ಬಸವ ಡಿಗ್ಗಾವಿ, ರಾಜಶೇಖರ ಹೂಗಾರ, ಶಿವಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.