
ಎಫ್ಐಆರ್
(ಸಾಂದರ್ಭಿಕ ಚಿತ್ರ)
ಗುರುಮಠಕಲ್ (ಯಾದಗಿರಿ): ತಾಲ್ಲೂಕಿನ ಎಲ್ಹೆರಿ ಗ್ರಾಮದ ಕಸ್ತೂರಿ ಬಾ ಬಾಲಿಕಾ ವಸತಿ ವಿದ್ಯಾಲಯ ಶಾಲೆಯಲ್ಲಿ 2017-18 ರಿಂದ 2022-23ರ ಅವಧಿಯಲ್ಲಿ ಶಿಕ್ಷಕಿಯಾಗಿದ್ದ ತಾಜು ಬಿ.ಎಂ. ಅವರ ವಿರುದ್ಧ ₹20 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರ ನಡೆಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಂಗಳವಾರ ಪ್ರಕರಣ ದಾಖಲಾಗಿದೆ.
ವಿವರ: ಶಿಕ್ಷಕಿ ತಾಜು ಬಿ.ಎಂ. ಅವರು ಎಸ್ಡಿಎಂಸಿ ನಡಾವಳಿಯಿಲ್ಲದೆ, ಸೂಕ್ತ ಕೋಟೇಶನ್ ಮತ್ತು ರಸೀದಿಗಳಿಲ್ಲದೆ, ಸ್ಥಳೀಯ ಅಂಗಡಿಗಳಿಂದ ಖರೀದಿಸುವ ನಿಯಮವಿದ್ದರೂ, ನಿಯಮ ಬಾಹಿರವಾಗಿ ಕಲಬುರಗಿ ನಗರದ ಖುಷಿ ಟ್ರೇಡಿಂಗ್ ಲಿಂಕ್ ಮತ್ತು ಕಸ್ತೂರಿಬಾ ಡಿಸ್ಟ್ರಿಬ್ಯೂಟರ್ ಅಲ್ಲಿ ಸಾಮಗ್ರಿ ಖರೀದಿಸಿದ್ದು, ಅವ್ಯವಹಾರ ನಡೆಸಿದ್ದಾರೆ.
ಈ ಕುರಿತು ಯಾದಗಿರಿ ಡಿಡಿಪಿಐ ಅವರು ಕೂಡಲೇ ಶಿಕ್ಷಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರಿಗೆ ನಿರ್ದೇಶನ ನೀಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರು ನೀಡಿದ ದೂರಿನಂತೆ ಶಿಕ್ಷಕಿ ತಾಜು ಬಿ.ಎಂ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ 2024ರ ಜೂನ್ 26ರಂದು ಅಂದಿನ ಡಿಡಿಪಿಐ ಎಚ್.ಟಿ. ಮಂಜುನಾಥ ಅವರು ಶಿಕ್ಷಕಿ ತಾಜು ಬಿ.ಎಂ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿದ್ದರು. ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.